ದೇವನಹಳ್ಳಿ: ಬಜೆಟ್ನಲ್ಲಿ ತಳಸಮುದಾಯದ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಬಿ.ಎಸ್.ಪಿ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ ಆರೋಪಿಸಿದರು.
ಇಲ್ಲಿನ ಬಿ.ಎಸ್.ಪಿ ಕಚೇರಿಯಲ್ಲಿ ಮಂಗಳವಾರ ಎಂ.ಗೋಪಿನಾಥ್ ರಚಿಸಿರುವ ‘ಗೋಹತ್ಯೆ ನಿಷೇಧ ಕೆಲವರತ್ತ ಗುರಿ ಹಲವರು ಬಲಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರ ಹಲವು ಬಲಿತ ಸಮುದಾಯಕ್ಕೆ ₹500 ಕೋಟಿ ನಿಗಮ ಮಂಡಳಿ ಅಡಿ ಅನುದಾನ ಘೋಷಣೆ ಮಾಡಿದೆ. ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ನಿಗಮ ಮಂಡಳಿಗಳ ತುಟಿಗೆ ತುಪ್ಪ ಸವರುವ ಕೆಲಸ ಮಾಡಿದೆ. ಪರಿಶಿಷ್ಟರ ಮೂಲ ಸೌಲಭ್ಯಕ್ಕೂ ಒತ್ತು ನೀಡಿಲ್ಲ ಎಂದು ಆರೋಪಿಸಿದರು.
ಗೋಮಾಂಸ ರಫ್ತು ಮಾಡುವವರು ಬಿಜೆಪಿ ಪಕ್ಷದ ಪ್ರಭಾವಿಗಳು. ಗೋಮಾಂಸ ವಿವಿಧ ಸಮುದಾಯಗಳ ಆಹಾರ ಪದ್ಧತಿಯಾಗಿದೆ. ಚರ್ಮದ ಉದ್ಯಮದಲ್ಲಿ ಲಕ್ಷಾಂತರ ಜನರು ಅವಲಂಬಿತರಾಗಿದ್ದಾರೆ. ಈಗ ಬೀದಿಪಾಲಾಗುವ ಸಂದರ್ಭ ಎದುರಾಗಿದೆ ಎಂದರು.
ಕ್ಯಾನ್ಷಿರಾಮ್ ರವರ 87ನೇ ಜಯಂತಿ ಅಂಗವಾಗಿ ಮಾ.15ರಂದು ದೇವನಹಳ್ಳಿ ಸರ್ಕಾರಿ ಕಿರಿಯ ಕಾಲೇಜು ಮೈದಾನದಲ್ಲಿ ಬೆಳಿಗ್ಗೆ 9.30ಕ್ಕೆ ಬೃಹತ್ ಉದ್ಯೋಗ ಮೇಳ ನಡೆಸಲಾಗುತ್ತಿದ್ದು 100ಕ್ಕೂ ಹೆಚ್ಚು ವಿವಿಧ ಖಾಸಗಿ ಕಂಪನಿಗಳು ಭಾಗವಹಿಸಿ ಅರ್ಹರಿಗೆ ಉದ್ಯೋಗ ನೀಡಲಿವೆ ಎಂದು ಹೇಳಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ನಂದಗುಂದ ಪಿ.ವೆಂಕಟೇಶ್ ಮಾತನಾಡಿ, ಗ್ರಾಮಾಂತರ ಜಿಲ್ಲೆಗೆ ಬಜೆಟ್ನಲ್ಲಿ ಬಿಡಿಗಾಸು ನೀಡಿಲ್ಲ. ಶಿವಮೊಗ್ಗ ಜಿಲ್ಲೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಆರೋಪಿಸಿದರು.
ಬಿ.ಎಸ್.ಪಿ ಜಿಲ್ಲಾಧ್ಯಕ್ಷ ಮುನಿಕೃಷ್ಣ, ಜಿಲ್ಲಾ ಸಂಯೋಜಕರಾದ ತಿಮ್ಮರಾಜು, ಎಚ್.ನರಸಿಂಹಯ್ಯ, ಪ್ರಧಾನ ಕಾರ್ಯದರ್ಶಿ ನರಸಿಂಹರಾಜು, ಉಪಾಧ್ಯಕ್ಷ ಮುನಿರಾಜು, ತಾಲ್ಲೂಕು ಅಧ್ಯಕ್ಷ ಬಂಗಾರಪ್ಪ ಇದ್ದರು.