ವಿಜಯಪುರ(ದೇವನಹಳ್ಳಿ): ಕಳೆದ ವರ್ಷದಲ್ಲಿ ಬಿದ್ದ ಭಾರಿ ಮಳೆಯಿಂದಾಗಿ ನಿರೀಕ್ಷೆಗೆ ತಕ್ಕಂತೆ ಬೆಳೆ ಆಗಿಲ್ಲ. ಆದ್ದರಿಂದ ಈ ವರ್ಷದಲ್ಲಿ ಒಣಮೇವಿನ ಕೊರತೆ ಕಂಡು ಬರುವ ಸಾಧ್ಯತೆ ಹೆಚ್ಚಾಗಿರುವ ಕಾರಣ, ರೈತರು ಒಣಹುಲ್ಲು ಸಂಗ್ರಹಿಸುತ್ತಿದ್ದಾರೆ.
ಸಾಮಾನ್ಯವಾಗಿ ಒಂದು ಟ್ರ್ಯಾಕ್ಟರ್ ಲೋಡು ಹುಲ್ಲಿಗೆ ₹10,000 ದಿಂದ ₹12,000 ಇರುತ್ತಿತು. ಮೇವಿನ ಅಭಾವದ ಸಂಭವದ ಹಿನ್ನೆಲೆಯಲ್ಲಿ ₹23,000ಕ್ಕೆ ಏರಿಕೆಯಾಗಿದೆ.
ಕಳೆದ ವರ್ಷ ಬಿದ್ದ ಅಕಾಲಿಕ ಮಳೆಯಿಂದ ಫಲಸಿಗೆ ಬಂದಿದ್ದ ರಾಗಿ ಬೆಳೆ ನಷ್ಟ ಆಯಿತು. ಮಳೆ ಹಿನ್ನೆಲೆಯಲ್ಲಿ ಕಟಾವು ಮಾಡಲು ಕಾರ್ಮಿಕರು ಸಿಗದೆ ಯಂತ್ರದಿಂದ ಕಟಾವು ಮಾಡಿಸಿದೆವು. ಯಂತ್ರವು ಭೂಮಿಯಿಂದ ಮುಕ್ಕಾಲು ಅಡಿ ಹುಲ್ಲು ಬಿಟ್ಟು ಕಟಾವು ಮಾಡಿದ ಕಾರಣ ಹುಲ್ಲು ಸಿಗಲಿಲ್ಲ. ನಾವು ಬೆಳ ಬೆಳೆದರೂ ಹೊರಗಡೆಯಿಂದ ಹುಲ್ಲು ಖರೀದಿಸುವ ಸ್ಥಿತಿ ಬಂದಿದೆ ಎಂದು ರೈತ ಹನುಮಂತೇಗೌಡ ಹೇಳುತ್ತಾರೆ.
ಈ ಬಾರಿ ಹೊಲಗಳಲ್ಲಿ ರಾಗಿಯನ್ನು ಬಿಟ್ಟರೆ ಬೇರೆ ಯಾವ ಬೆಳೆಗಳನ್ನು ಬೆಳೆದಿಲ್ಲ. ಇದರಿಂದ ಒಣ ಮೇವಿನ ಅಭಾವ ಸೃಷ್ಟಿಯಾಗಿದೆ ಎನ್ನುತ್ತಾರೆ ಅವರು.
‘ನಮ್ಮ ಭಾಗದಲ್ಲಿ ಒಣಹುಲ್ಲು ಸಿಗುವುದಿಲ್ಲ. ಚಿಕ್ಕಬಳ್ಳಾಪುರದ ಗೌರಿಬಿದನೂರು, ಮಂಚೇನಹಳ್ಳಿಯ ಕಡೆಯಿಂದ ಖರೀದಿ ಮಾಡಿಕೊಂಡು ಬರಬೇಕಾಗಿದೆ. ಒಂದು ಲೋಡು ಹುಲ್ಲು ಮನೆಯ ಹತ್ತಿರಕ್ಕೆ ತರಲು ₹23,000 ವೆಚ್ಚವಾಗುತ್ತಿದೆ’ ಎಂದು ರೈತ ರಾಮಕೃಷ್ಣಪ್ಪ ತಿಳಿಸಿದರು.