ಸೂಲಿಬೆಲೆ: ದೇವರ ಆರಾಧನೆಯಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಬೇಗೂರು ತಿರುಮಲ ವೆಂಕಟೇಶ್ವರ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಬಿ.ಎಂ.ತಮ್ಮೇಗೌಡ ಹೇಳಿದರು.
ಹೊಸಕೋಟೆ ತಾಲ್ಲೂಕಿನ ಬೇಗೂರು ಗ್ರಾಮದ ತಿರುಮಲ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇವಾಲಯಗಳನ್ನು ನೆಮ್ಮದಿಯ ತಾಣವನ್ನಾಗಿ ಮನುಷ್ಯ ಮಾಡಿಕೊಂಡಿದ್ದು, ದೇವರಲ್ಲಿ ಹರಕೆ, ಆರಾಧನೆ ಮೂಲಕ ಪರಿಹಾರ ಮಾಡಿಕೊಳ್ಳುತ್ತ, ಹಿರಿಯರು ತೋರಿದ ದಾರಿಯಲ್ಲಿ ಸಾಗುತ್ತಿರುವುದು ದೇಶಿಯ ಸಂಸ್ಕೃತಿಯ ಆಧಾರ ಎಂದರು.
ಶಿಕ್ಷಣ ತಜ್ಞ ದೇವಿದಾಸ್ ಸುಭ್ರಾಯ್ ಶೇಠ್ ಮಾತನಾಡಿದರು. ಪ್ರಧಾನ ಅರ್ಚಕ ಅಶ್ವತ್ಥ್ ಭಾರದ್ವಾಜ್ ಮಾತನಾಡಿ, ವೈಕುಂಠ ಏಕದಶಿಯಂದು ಸಪ್ತದ್ವಾರಗಳ ಮೂಲಕ ಪ್ರವೇಶಿಸಿ ಉತ್ತರದ ಬಾಗಿಲಿನ ಮೂಲಕ ದರ್ಶನ ಪಡೆಯಬೇಕು ಎಂಬ ಪ್ರತೀತಿ ಇದೆ. ಎಲ್ಲ ದೇವಾಲಯಗಳಲ್ಲೂ ವಿಶೇಷವಾಗಿ ಆಚರಣೆ ನಡೆಯುತ್ತದೆ ಎಂದರು.
ದೇವರಿಗೆ ವಿಶೇಷ ಹೂವಿನ ಅಲಂಕಾರ ಸೇವೆ. ಫಲಪುಷ್ಪಗಳ ಸೇವೆ, ಸಪ್ತದ್ವಾರಗಳ ಸೇವೆ ಜರುಗಿಸಲಾಗಿತ್ತು.
ಮುಖಂಡರಾದ ಬಿ.ಎಂ.ನಾರಾಯಣಸ್ವಾಮಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ತಮ್ಮೇಗೌಡ, ಡೈರಿ ಆಂಜಿನಪ್ಪ, ಟ್ರಸ್ಟ್ ನಿರ್ದೇಶಕರಾದ ಕೃಷ್ಣ, ಗೋವಿಂದರಾಜ್, ಬಿ.ಎ.ನಾರಾಯಣಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ಬೈರೇಗೌಡ, ಅರ್ಚಕ ರಘುಕುಮಾರ್, ರಂಜಿತ್ ಕುಮಾರ್ ಇದ್ದರು.