ವಿಜಯಪುರ: ಪಟ್ಟಣದಲ್ಲಿ ಅನಧಿಕೃತ ಕಸಾಯಿಖಾನೆಗಳನ್ನು ಗುರುವಾರ ಪುರಸಭೆ ಅಧಿಕಾರಿಗಳು ಬಂದ್ ಮಾಡಿಸಿದರು.
ನೋಟಿಸ್ ಕೊಟ್ಟರೂ ಕಸಾಯಿಖಾನೆ ನಡೆಸುವವರು ಅಲಕ್ಷ್ಯ ವಹಿಸಿದ ಕಾರಣ ಮುಖ್ಯಾಧಿಕಾರಿಎ.ಎಚ್.ನಾಗರಾಜ್ ಅವರು ಪುರಸಭೆ ಸಿಬ್ಬಂದಿ ಮತ್ತು ಪೊಲೀಸರ ನೆರವಿನಿಂದ ಈ ಕೇಂದ್ರಗಳನ್ನು ಬಂದ್ ಮಾಡಿಸಿದರು.
ದನಗಳ ಕಟಾವು ಮಾಡಿದ ಸಂದರ್ಭದಲ್ಲಿ ಹೊರಬರುತ್ತಿರುವ ರಕ್ತ ಮತ್ತು ತ್ಯಾಜ್ಯಗಳಿಂದಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದುರ್ವಾಸನೆ ಬೀರುತ್ತಿದೆ. ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಬಗ್ಗೆ ಸಾಕಷ್ಟು ಮಂದಿ ಜಿಲ್ಲಾಡಳಿತಕ್ಕೆ ದೂರು ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆದೇಶವಿರುವ ಕಾರಣ ತಕ್ಷಣ ಅನುಮತಿಯಿಲ್ಲದ ದನದ ಮಾಂಸದ ಅಂಗಡಿಗಳನ್ನು ಮುಚ್ಚಬೇಕು ಎಂದು ಕೋರಿದರು. ಮಧ್ಯಾಹ್ನ 3 ಗಂಟೆಯವರೆಗೂ ಕಾದು ನೋಡಿದ ಅಧಿಕಾರಿಗಳು, ಕಸಾಯಿಖಾನೆ ಮಾಲೀಕರು ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಪೊಲೀಸ್ ನೆರವಿನಿಂದ ಬಂದ್ ಮಾಡಿಸಿದರು.
ಆರೋಗ್ಯ ನಿರೀಕ್ಷಕ ಮಹೇಶ್ಕುಮಾರ್, ಸಹಾಯಕ ಎಂಜಿನಿಯರ್ ಪ್ರಭಾವತಿ, ಲೆಕ್ಕಾಧಿಕಾರಿ ಗೋಪಾಲ್, ಪೊಲೀಸ್ ಎಸ್.ಬಿ. ಕೃಷ್ಣನಾಯಕ್, ಕಾನ್ಸ್ಟೆಬಲ್ ವೆಂಕಟೇಶ್, ಇದ್ದರು.