ದೇವನಹಳ್ಳಿ: ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕರಾದವರು ಸರ್ಕಾರದ ಪ್ರತಿನಿಧಿಯಾಗಿ ಸೇವಾ ಮನೋಭಾವದಿಂದ ಸೇವಕನಾಗಿ ಕರ್ತವ್ಯ ನಿರ್ವಹಣೆ ಮಾಡಬೇಕು. ಕೇವಲ ಕಾರಿನಲ್ಲಿ ಓಡಾಡಿದ ಮಾತ್ರಕ್ಕೆ ಯಾವ ಪ್ರಗತಿಯೂ ಆಗುವುದಿಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ. ಶ್ರೀನಿವಾಸ್ಟೀಕಿಸಿದರು.
ತಾಲ್ಲೂಕಿನ ವಿಶ್ವನಾಥಪುರ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡ ಸಿ. ವಿಜಯ್ ಕುಮಾರ್ ಸ್ಮರಣಾರ್ಥ ಶನಿವಾರ ಹಮ್ಮಿಕೊಂಡಿದ್ದ ಎಸಿಎಸ್ ಕಪ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಳೆದ 10 ವರ್ಷಗಳಿಂದ ಗುರುತರವಾದ ಯಾವ ಕಾರ್ಯಗಳೂ ಆಗಿಲ್ಲ. ಪ್ರಸ್ತುತ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ದೊರೆಯುತ್ತಿಲ್ಲ. ಬಡವರು, ದಲಿತರಿಗೆ ಉತ್ತಮ ಮನೆ ನೀಡಲು ಸಾಧ್ಯವಾಗಿಲ್ಲ. ಸಂಚಾರ ಯೋಗ್ಯ ರಸ್ತೆಗಳು ಅಭಿವೃದ್ಧಿಯಾಗಿಲ್ಲ. ಕಾಂಗ್ರೆಸ್ಸೇತರರಿಂದ ಯಾವ ಅಭಿವೃದ್ಧಿ ಕೆಲಸವಾಗುತ್ತಿಲ್ಲ ಎಂದರು.
ಪಂದ್ಯಾವಳಿಯ ಆಯೋಜನೆಯಿಂದ ಯುವಕರ ದೈಹಿಕ, ಮಾನಸಿಕ ಆರೋಗ್ಯ ಹೆಚ್ಚುತ್ತದೆ. ಸ್ಥಳೀಯ ನಾಯಕರ ಒಗ್ಗೂಡಿಕೆಗೆ ವೇದಿಕೆಯಾಗಲಿದೆ. ಸಂಘಟಿತರಾಗಿ ಕ್ರಿಕೆಟ್ನಲ್ಲಿ ಕಪ್ ಗೆಲ್ಲುವ ರೀತಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸೋಣ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ.ಆರ್. ನಾಗೇಶ್, ಮುಖಂಡರಾದ ಚೇತನ್ ಗೌಡ, ವಿಎಸ್ಸೆಸ್ಸೆನ್ ಸದಸ್ಯ ರಮೇಶ್, ನಂಜೇಗೌಡ, ಆಂಜಿನಣ್ಣ, ಸುಬ್ರಮಣ್ಯ, ನರಸಿಂಹ, ಕೋದಂಡ, ಶ್ರೀನಿವಾಸ್, ಮುನಿರಾಜು ಉಪಸ್ಥಿತರಿದ್ದರು.