ಹೊಸಕೋಟೆ: ಇಲ್ಲಿನ ಸರ್ಕಾರಿ ಬಾಲಕರ ಪ್ರಾಥಮಿಕ ಶಾಲಾ ಅವರಣದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಮತದಾರರಿಗೆ ಮತದಾನದ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಉದ್ಘಾಟಿಸಿ ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಲತಾ ಅವರು, ‘ಇದೇ 18ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು. ಮತದಾನ ಕೇವಲ ಹಕ್ಕಲ್ಲ ಅದು ನಮ್ಮೆಲ್ಲರ ಕರ್ತವ್ಯ. ಹಾಗಾಗಿ ಸಾಲುಸಾಲು ಸರ್ಕಾರಿ ರಜೆ ಇದ್ದರೂ ಎಲ್ಲರೂ ಮತದಾನದ ಹಬ್ಬದಲ್ಲಿ ಭಾಗವಹಿಸಬೇಕು’ ಎಂದರು.
ಮಹಿಳೆಯರು ಮನೆಯಲ್ಲಿ ಎಷ್ಟೇ ಕೆಲಸವಿದ್ದರೂ ಬಿಡುವು ಮಾಡಿಕೊಂಡು ಕಡ್ಡಾಯವಾಗಿ ಮತ ಚಲಾಯಿಸಿ ಪ್ರಜಾಪ್ರಭುತ್ವದ ಹಬ್ಬವನ್ನು ಯಶಸ್ವಿ ಮಾಡಬೇಕು ಎಂದರು.
ಇದಕ್ಕೂ ಮೊದಲು ವಿವಿಧ ಊರುಗಳಿಂದ ಬಂದ ಸ್ತ್ರೀಶಕ್ತಿ ಕೇಂದ್ರದ ಮಹಿಳೆಯರು ಮತದಾನದ ಜಾಗೃತಿಗಾಗಿ ಹಾಕಿದ್ದ ರಂಗೋಲಿಗಳನ್ನು ವೀಕ್ಷಿಸಿದರು.
ಎಲ್ಲರಿಗೂ ಕಡ್ಡಾಯ ಮತದಾನದ ಪ್ರತಿಜ್ಙೆ ಬೋಧಿಸಲಾಯಿತು. ಕಡ್ಡಾಯ ಮತದಾನಕ್ಕಾಗಿ ಸಹಿ ಮಾಡುವ ಕಾರ್ಯಕ್ರಮ ನಡೆಯಿತು. ಅನಂತರ ಊರಿನ ಪ್ರಮುಖ ರಸ್ತೆಗಳಲ್ಲಿ ಮತದಾನ ಜಾಗೃತಿಗಾಗಿ ವಿವಿಧ ಶಾಲೆಯ ಮಕ್ಕಳು, ಆಶಾ ಕಾರ್ಯಕರ್ತರು, ಪುರಸಭೆಯ ಸಿಬ್ಬಂದಿ, ಸೇವಾದಳ, ಅಂಗವಿಕಲರೂ ಸೇರಿದಂತೆ ಎಲ್ಲರೂ ಮೆರವಣಿಗೆ ನಡೆಸಿದರು.
ಸೈಕಲ್ ನಲ್ಲಿ ಮಕ್ಕಳು ಭಾಗವಹಿಸಿದ್ದರು. ಕಡ್ಡಾಯ ಮತದಾನದ ಬರಹಗಳಿರುವ ಗಾಳಿ ಪಟವನ್ನು ಹಾರಿಸಲಾಯಿತು. 2ನೇ ಗ್ರೇಡ್ ತಹಸೀಲ್ದಾರ್ ಚಂದ್ರಶೇಖರ್, ಬಿಇಒ ಕನ್ನಯ್ಯ ಭಾಗವಹಿಸಿದ್ದರು.