ದೊಡ್ಡಬಳ್ಳಾಪುರ:‘ಸಾವಿರಾರು ವರ್ಷಗಳಿಂದ ಜನರು ನಂಬಿಕೊಂಡು ಬಂದಿರುವ ಧಾರ್ಮಿಕ ಭಾವನೆಗೆ ಧಕ್ಕೆಯಾಗುವಂತ ತೀರ್ಪು ಖಂಡನೀಯ. ಜನರ ಧಾರ್ಮಿಕ ವಿಚಾರಗಳು ನ್ಯಾಯಾಲಯದ ಮೆಟ್ಟಿಲೇರಿದ್ದು ಸಹ ವಿಪರ್ಯಾಸ’ ಎಂದು ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಟಿ.ಎಸ್.ಮಹದೇವಯ್ಯ ಬೇಸರ ವ್ಯಕ್ತಪಡಿಸಿದರು.
ಶಬರಿಮಲೆ ಕ್ಷೇತ್ರ ಸಂರಕ್ಷಣಾ ಸಮಿತಿ ವತಿಯಿಂದ ಶುಕ್ರವಾರ ಮಹಿಳೆಯರು ಶಬರಿಮಲೆ ಅಯ್ಯಪ್ಪ ದೇವಾಲಯ ಪ್ರವೇಶ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
‘47 ದಿನ ತಣ್ಣೀರು ಸ್ನಾನ, ಧ್ಯಾನ, ವ್ರತ, ಪೂಜೆ, ಭಜನೆ, ಬರಿಗಾಲಿನ ನಡಿಗೆ ಅಂತಹ ಕಠಿಣ ವ್ರತದಲ್ಲಿ ಭಾಗವಹಿಸುವ ಮಾಲಾಧಾರಿಗಳ ಭಾವನೆಗಳನ್ನು ರಕ್ಷಿಸಬೇಕಾದ ಸರ್ಕಾರವೇ ಮುಂದೆ ನಿಂತು ಜನರ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ಮಾಡುತ್ತಿದೆ. ಯಾವುದೇ ಪಕ್ಷವಾದರೂ ಜನರ ಭಾವನೆಗಳಿಗೆ ಬೆಲೆ ಕೊಡಬೇಕು’ ಎಂದರು.
‘ಹಿಂದೂ ಧರ್ಮದ ಬಗ್ಗೆ ನಂಬಿಕೆ ಇಲ್ಲದ ಇಬ್ಬರು ಕ್ರಿಶ್ಚಿಯನ್ ಮಹಿಳೆಯರನ್ನು ರಾತ್ರೋರಾತ್ರಿ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನವನ್ನು ಪ್ರವೇಶಿಸಲು ಅನುವುಮಾಡಿಟ್ಟಿದೆ. ಇದು ಕೋಟ್ಯಂತರ ಆಸ್ತಿಕರಿಗೆ, ಅದರಲ್ಲೂ ಅಯ್ಯಪ್ಪ ಭಕ್ತರಿಗೆ ಆಘಾತ ಉಂಟು ಮಾಡಿದೆ’ ಎಂದರು.
‘ಬಿಜೆಪಿ ತಾಲ್ಲೂಕು ಒಬಿಸಿ ಘಟಕದ ಅಧ್ಯಕ್ಷ ರಾಮಕೃಷ್ಣ ಮಾತನಾಡಿ, ಕೇರಳದಲ್ಲಿನ ಕಮ್ಯೂನಿಸ್ಟ್ ಸರ್ಕಾರ ಪೊಲೀಸರ ಸಹಕಾರದೊಂದಿಗೆ ಬಹುಸಂಖ್ಯಾತ ಹಿಂದೂಗಳ ನಂಬಿಕೆಗಳ ಮೇಲೆ ಮಾಡಿರುವ ಅತ್ಯಾಚಾರ ಇದು. ಕ್ಷೇತ್ರದ ಪಾವಿತ್ರ್ಯವನ್ನು ಹಾಳುಮಾಡಲು ವ್ಯವಸ್ಥಿತವಾಗಿ ಸಂಚು ರೂಪಿಸಿದೆ. ತುರಾತುರಿಯಲ್ಲಿ ಕ್ರಿಶ್ಚಿಯನ್ ಮಹಿಳೆಯರನ್ನು ದೇಗುಲಕ್ಕೆ ಕಳುಹಿಸುವ ಅಗತ್ಯ ಏನಿತ್ತು. ಹಿಂದೂ ವಿರೋಧಿ ಸರ್ಕಾರವನ್ನು ಕಿತ್ತೊಗೆಯಿರಿ’ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಪ್ರತಿಭಟನೆಯಲ್ಲಿ ಅಯ್ಯಪ್ಪ ಹಿರಿಯ ಮಾಲಾಧಾರಿಗಳಾದ ಜಯಸಿಂಹ, ತಿಪ್ಪಣ್ಣ, ಮಹಂತೇಶ್, ವಕೀಲರಾದ ರವಿ ಮಾವಿನಕುಂಟೆ, ಶಬರಿಮಲೆ ಕ್ಷೇತ್ರ ಸಂರಕ್ಷಣಾ ಸಮಿತಿಯ ಮಾಲಾಧಾರಿಗಳು, ನಮೋ ಸೇನೆ, ಹಿಂದೂ ಜಾಗರಣಾ ವೇದಿಕೆ, ಬಜರಂಗದಳ ಕಾರ್ಯಕರ್ತರು, ಬಿಜೆಪಿ ತಾಲ್ಲೂಕು ಪದಾಧಿಕಾರಿಗಳು ಹಾಜರಿದ್ದರು.