ದೊಡ್ಡಬಳ್ಳಾಪುರ: ನಿರ್ಮಾಣ ಹಂತದಲ್ಲಿದ್ದ ಕಟ್ಟಡಕ್ಕೆ ಮೇಲ್ಚಾವಣಿ ಹಾಕಲು ಕಂಬಿ ಕಟ್ಟುವ ವೇಳೆ ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಗರದ ವೀರಭದ್ರನಪಾಳ್ಯದಲ್ಲಿ ಶನಿವಾರ ನಡೆದಿದೆ.
ವಿವೇಕಾನಂದ ನಗರದ ನಿವಾಸಿ ಮೌಲ(36) ಮೃತಪಟ್ಟವರು.
ವಿದ್ಯುತ್ ತಂತಿ ಹಾದು ಹೋಗಿರುವ ಕೆಳಭಾಗದಲ್ಲಿಯೇ ನಿರ್ಮಿಸಲಾಗುತ್ತಿದ್ದ ಮನೆಯ ಮೇಲ್ಚಾವಣಿಗೆ ಕಂಬಿಗಳನ್ನು ಕಟ್ಟಲು ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಕಾರ್ಮಿಕನನ್ನು ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಸಬ್ ಇನ್ಸ್ಪೆಕ್ಟರ್ ರೇಣುಕಾ ಯಾದವ್ ಭೇಟಿ ನೀಡಿ ಪರಿಶೀಲಿಸಿದರು. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿಗಳ ಘರ್ಷಣೆ: ದೂರು ದಾಖಲು ದೊಡ್ಡಬಳ್ಳಾಪುರ: ರಸ್ತೆಗೆ ಅಡ್ಡಲಾಗಿ ನಿಂತಿದ್ದ ವಿದ್ಯಾರ್ಥಿಗಳನ್ನು ಬದಿಗೆ ಸರಿಯುವಂತೆ ತಿಳಿಸಿದ ಚಾಲಕ ಹಾಗೂ ವಿದ್ಯಾರ್ಥಿಗಳ ನಡುವೆ ನಡೆದ ಮಾತಿನ ಚಕಮಕಿಯು ಘರ್ಷಣೆ ಸ್ವರೂಪ ಪಡೆದುಕೊಂಡ ಘಟನೆ ನಗರದ ಆತ್ರೇಯ ಆಯುರ್ವೇದ ಕಾಲೇಜು ಸಮೀಪ ನಡೆದಿದೆ.
ಶುಕ್ರವಾರ ಸಂಜೆ ವಿದ್ಯಾರ್ಥಿಗಳನ್ನು ಪಿ.ಜಿಗೆ ಬಿಟ್ಟು ಮತ್ತೆ ಕಾಲೇಜಿಗೆ ಮರಳುವ ವೇಳೆ ಚಾಲಕ ರಮೇಶ್ ಎಂಬುವರು ರಸ್ತೆಯಲ್ಲಿ ಗುಂಪಾಗಿ ನಿಂತಿದ್ದ ವಿದ್ಯಾರ್ಥಿಗಳನ್ನು ಬದಿಗೆ ಸರಿಯುವಂತೆ ತಿಳಿಸಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ಹಾಗೂ ಚಾಲಕನ ನಡುವೆ ಗಲಾಟೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.