ಹೊಸಕೋಟೆ: ತಾಲ್ಲೂಕಿನ ಬೂದಿಗೆರೆ ಕ್ರಾಸ್ ಬಳಿಯ ಬೆಂಗಾಲ್ ಲ್ಯಾಂಪ್ಸ್ ಕಾರ್ಖಾನೆ ಕಾರ್ಮಿಕರು ತಮಗೆ ಸರಿಯಾದ ಪರಿಹಾರ ದೊರಕಿಲ್ಲವೆಂದು ಆರೋಪಿಸಿ ಕಾರ್ಖಾನೆಯ ಮಾಲೀಕರ ವಿರುದ್ಧ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಬೆಂಗಾಲ್ ಲ್ಯಾಂಪ್ಸ್ ಕಾರ್ಮಿಕರ ಸಂಘದ ಅಧ್ಯಕ್ಷ ಎಸ್. ನಾಗರಾಜ್ ಮಾತನಾಡಿ, 1972ರಿಂದ ನಡೆಯುತ್ತಿದ್ದ ಕಾರ್ಖಾನೆಯಲ್ಲಿ ಸುಮಾರು 450 ಕಾರ್ಮಿಕರು ಕೆಲಸ ಮಾಡುತ್ತಿದ್ದೆವು. ಆಗಿನ ಕಾಲದಲ್ಲೇ ಕಾರ್ಖಾನೆಯು ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿತ್ತು. ಅಂತಹ ಕಂಪನಿಯನ್ನು ಮಾಲೀಕರು ಯಾವುದೇ ಸಕಾರಣವಿಲ್ಲದೆ 1989ರಲ್ಲಿ ಮುಚ್ಚಿ ಕಾರ್ಮಿಕರನ್ನು ಬೀದಿಪಾಲು ಮಾಡಿದರು ಎಂದು ದೂರಿದರು.
ಅಂದಿನಿಂದ ನಮಗೆ ಸಿಗಬೇಕಾದ ಪರಿಹಾರಕ್ಕಾಗಿ ವಿವಿಧ ಹಂತದ ನ್ಯಾಯಾಲಯಗಳಲ್ಲಿ ದಾವೆ ಹೂಡಿದ್ದೇವೆ.0 ನಂತರ ನಮ್ಮ ಪರವಾಗಿ ತೀರ್ಪು ಬಂದ ನಂತರ ನಮಗೆ ಮಾಲೀಕರು ಪರಿಹಾರವಾಗಿ ₹ 4 ಕೋಟಿ ಘೋಷಿಸಿದರು. ಇದರಿಂದ ಪ್ರತಿಯೊಬ್ಬರಿಗೂ ಸುಮಾರು ₹ 1 ಲಕ್ಷ ಪರಿಹಾರವಾಗಿ ದೊರೆಯುತ್ತದೆ. ಈಗಿನ ಜೀವನಮಟ್ಟದಲ್ಲಿ ಇದರಿಂದ ಬದಕುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಸಾಬ್, ಖಜಾಂಚಿ ಸಿ.ಪಿ. ಕೃಷ್ಣಪ್ಪ, ಸಿಐಟಿಯು ಸಂಘಟನೆಯ ತಾಲ್ಲೂಕು ಅಧ್ಯಕ್ಷ ಹರೀಂದ್ರ, ಮೋಹನ್ ಸೇರಿದಂತೆ ಕಂಪನಿಯ ನೂರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.