ಚಿಕ್ಕಬಳ್ಳಾಪುರ: ಕೊರೊನಾ ವೈರಸ್ ಸೃಷ್ಟಿಸಿರುವ ಪರಿಣಾಮಗಳು ದ್ರಾಕ್ಷಿ ಬೆಳೆಗಾರರನ್ನು ಕಂಗಾಲು ಮಾಡಿದೆ. ಕೈಗೆ ಬಂದ ಫಸಲನ್ನು ಸಾಗಿಸಲಾಗದೆ, ಸೂಕ್ತ ಮಾರುಕಟ್ಟೆ ಸಿಗದೆ ರೈತರು ದ್ರಾಕ್ಷಿಯನ್ನು ತಿಪ್ಪೆಗೆ ಸುರಿಯುತ್ತಿದ್ದಾರೆ.
ಚಿಕ್ಕಬಳ್ಳಾಪುರ ತಾಲ್ಲೂಕಿನ ರೇಣುಮಾಕಲಹಳ್ಳಿ ರೈತ ಮುನಿಶಾಮಪ್ಪ ಅವರು ತಾವು ಬೆಳೆದ ದ್ರಾಕ್ಷಿಯನ್ನೆಲ್ಲ ಭಾನುವಾರ ತಿಪ್ಪೆಗೆ ಸುರಿದಿದ್ದು, ತೀವ್ರ ಬೇಸರ ಅನುಭವಿಸಿದ್ದಾರೆ.
ಕೊರೊನಾ ವೈರಸ್ ಸೃಷ್ಟಿಸಿರುವ ಭೀತಿಯಿಂದಾಗಿ ಸರಕು ಸಾಗಣೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಜೊತೆಗೆ ದ್ರಾಕ್ಷಿಯನ್ನು ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿ ಮಾರುಕಟ್ಟೆಗೆ ಸಾಗಿಸಲಾಗದೇ ರೈತರು ದ್ರಾಕ್ಷಿಯನ್ನು ನಾಶ ಮಾಡುತ್ತಿದ್ದಾರೆ.
ಇನ್ನೂ ಕೆಲವೆಡೆ ಕಟಾವು ನಡೆಯದೆ ದ್ರಾಕ್ಷಿ ಬೆಳೆ ತೋಟಗಳಲ್ಲೇ ಕೊಳೆಯುತ್ತಿದೆ.
ಸರ್ಕಾರ ನೆರವಿಗೆ ಮೊರೆ
ಒಂದೊಮ್ಮೆ ಸರ್ಕಾರ ನೆರವಿಗೆ ಬಂದು, ಹೊರರಾಜ್ಯಗಳ ಮಾರುಕಟ್ಟೆಗಳಿಗೆ ದ್ರಾಕ್ಷಿ ಸಾಗಿಸಲು ಅವಕಾಶ ಕೊಡಿಸದಿದ್ದರೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುಮಾರು ₹200 ಕೋಟಿಗೂ ಅಧಿಕ ನಷ್ಟವಾಗುವ ಅಂದಾಜಿದೆ. ಹೀಗಾಗಿ ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.