ಆನೇಕಲ್: ಅಂತರರಾಷ್ಟ್ರೀಯ ಮಾನ್ಯತೆ ಯೋಗಕ್ಕೆ ಸಿಗುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಯೋಗ ಫೆಡರೇಷನ್ ಸ್ಥಾಪನೆ ಮಾಡಲಾಗಿದೆ. ಯೋಗಕ್ಕೆ ಒಲಿಂಪಿಕ್ನಲ್ಲಿ ಅವಕಾಶ ದೊರೆಯುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ ಎಂದು ಎಸ್-ವ್ಯಾಸ ಯೋಗ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಆರ್.ನಾಗೇಂದ್ರ ತಿಳಿಸಿದರು.
ಅವರು ತಾಲ್ಲೂಕಿನ ಜಿಗಣಿ ಸಮೀಪದ ಪ್ರಶಾಂತಿ ಕುಟೀರದ ಎಸ್-ವ್ಯಾಸ ಯೋಗ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ 18ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯೋಗ ಚಿಕಿತ್ಸೆ ಮೂಲಕ ಎಲ್ಲ ಕಾಯಿಲೆಗಳಿಗೂ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ಯೋಗದ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹೆಚ್ಚು ರೂಪಿಸುವ ಅವಶ್ಯ ಇದೆ. ಮಧುಮೇಹ, ಕ್ಯಾನ್ಸರ್ ಸೇರಿದಂತೆ ಹಲವು ಮಾರಕ ಕಾಯಿಲೆಗಳಿಗೆ ಯೋಗದ ಮೂಲಕ ಚಿಕಿತ್ಸೆ ಸಿಗುತ್ತದೆ. ಯೋಗ ವಿಶ್ವವಿದ್ಯಾಲಯದಲ್ಲಿ ಹಲವು ಸಂಶೋಧನಾ ಪ್ರಬಂಧಗಳು ಮಂಡನೆಯಾಗಿವೆ ಎಂದರು.
ಶೃಂಗೇರಿ ಶಾರದ ಪೀಠದ ಆಡಳಿತಾಧಿಕಾರಿ ಗೌರಿಶಂಕರ್ ಮಾತನಾಡಿ, ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಜನರು ತಮ್ಮ ಆರೋಗ್ಯ ವೃದ್ಧಿಸಿಕೊಳ್ಳುತ್ತಿದ್ದಾರೆ. ಆಯುರ್ವೇದ ಔಷಧಾಲಯಗಳಲ್ಲಿ ಜನರಿಗೆ ಪರಿಹಾರ ಸಿಕ್ಕಿದೆ ಎಂದರು.
ಕರ್ನಾಟಕ ಮತ್ತು ಗೋವಾ ರಾಜ್ಯ ಆದಾಯ ತೆರಿಗೆ ಆಯುಕ್ತ ರವಿಶಂಕರ್ ಮಾತನಾಡಿ, ದೇಶ ವಿದೇಶಗಳಲ್ಲಿ ಯೋಗ ಪರಿಚಯಿಸುವ ಮೂಲಕ ಭಾರತ ವಿಶ್ವಗುರುವಾಗಿದೆ ಎಂದರು.
ಪಿಎಚ್.ಡಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಉಪಕುಲಪತಿ ಡಾ.ರಾಮಕೃಷ್ಣ, ರಿಜಿಸ್ಟ್ರಾರ್ ಡಾ.ಎಂ.ಕೆ.ಶ್ರೀಧರ್, ವಿಶ್ವವಿದ್ಯಾಲಯದ ರಾಮಚಂದ್ರ.ಜಿ.ಭಟ್, ದಯಾನಂದ್ ಇದ್ದರು.