ವಿಜಯಪುರ: ಮೊದಲ ಬಾರಿಗೆ ಮತದಾನ ಮಾಡಲಿರುವ ಪ್ರತಿಯೊಬ್ಬ ಯುವ ಮತದಾರರು ಕಡ್ಡಾಯವಾಗಿ ಮತದಾನ ಮಾಡುವುದರ ಜೊತೆಯಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಕೆಲಸ ಮಾಡಬೇಕು ಎಂದು ಮುಖಂಡ ರಾಮಚಂದ್ರಪ್ಪ ಹೇಳಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಆಯ್ಕೆಯಾಗಬೇಕಾಗಿರುವ ಜನಪ್ರತಿನಿಧಿಗಳು ದೇಶದ ಏಳಿಗೆಗಾಗಿ ಶ್ರಮಿಸಿದವರು ಆಗಿರಬೇಕೆ ಹೊರತು, ಬಂಡವಾಳ ಶಾಹಿಗಳಾಗಿ ಹಣದಿಂದ ಮತ ಖರೀದಿ ಮಾಡುವವರಾಗಿರಬಾರದು ಎಂದರು.
ಮುಖಂಡ ಸಿ. ಮುನಿಯಪ್ಪ ಮಾತನಾಡಿ, ದೇಶದಲ್ಲಿ ನಡೆಯುತ್ತಿರುವ ಮಹಾ ಚುನಾವಣೆಯಲ್ಲಿ ಪ್ರಜ್ಞಾವಂತ ಮತದಾರರು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ಮತದಾನ ಮಾಡಬೇಕು ಎಂದರು.
ಮುಖಂಡ ಡಾ. ವಿ.ಎನ್. ರಮೇಶ್ ಮಾತನಾಡಿ, ಪಠ್ಯಕ್ರಮಗಳಲ್ಲಿ ಮತದಾನದ ವಿಚಾರಗಳನ್ನು ಅಳವಡಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿಯಾಗಬೇಕು ಎಂದರು.
ಮುಖಂಡ ಶಬ್ಬೀರ್ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ರಚನೆ ಮಾಡಿರುವ ಸಂವಿಧಾನ ಬದ್ಧವಾಗಿ ಈ ದೇಶವನ್ನು ಮುನ್ನಡೆಸುವಂತಹ ಸರ್ಕಾರಗಳು ಅವಶ್ಯವಿದೆ. ಕೆಲ ನಾಯಕರು ಸಂವಿಧಾನವನ್ನು ಬದಲಾವಣೆ ಮಾಡಲಿಕ್ಕೆ ಮನಸ್ಸು ಮಾಡಿದ್ದಾರೆ. ಇಂತಹ ನಾಯಕರಿಗೆ ಮತದಾನದ ಮೂಲಕ ಜನರು ಉತ್ತರ ನೀಡಬೇಕು ಎಂದರು.
ಮುಖಂಡ ಮುನಯ್ಯ ಮಾತನಾಡಿ, ಸಮಾಜದಲ್ಲಿನ ಎಲ್ಲ ಜಾತಿ ವರ್ಗಗಳನ್ನು ಒಗ್ಗೂಡಿಸುವ, ಎಲ್ಲ ಸಮಾಜಗಳಿಗೆ ಸಮಾನತೆಯನ್ನು ಕಲ್ಪಿಸುವ ಶಕ್ತಿಯಿರುವ ಸಂವಿಧಾನದಡಿಯಲ್ಲಿ ಕಾರ್ಯನಿರ್ವಹಿಸುವಂತಹ ನಾಯಕರು ದೇಶಕ್ಕೆ ಬೇಕಾಗಿದ್ದಾರೆ ಎಂದರು.