ದೇವನಹಳ್ಳಿ: ತಾಲ್ಲೂಕಿನ ಕುಂದಾಣ ಸರ್ಕಾರಿ ಕಿರಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೋಮವಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಲಕ್ಷ್ಮೀನಾರಾಯಣ ದಿಢೀರ್ ಭೇಟಿ ನೀಡಿದರು.
ಆರೋಗ್ಯ ಕೇಂದ್ರದಲ್ಲಿನ ಪ್ರಸೂತಿ ಕೋಣೆ, ಶೌಚಾಲಯ, ಆಸ್ಪತ್ರೆಯಲ್ಲಿನ ಒಳ ಮತ್ತು ಹೊರ ಆವರಣಗಳ ಸ್ವಚ್ಛತೆ ಹಾಗೂ ಔಷಧಿಗಳ ಪರಿಶೀಲನೆ ನಡೆಸಿದರು.
ನಂತರ ಮಾಧ್ಯಮದವರ ಜತೆ ಮಾತನಾಡಿದ ಅವರು, ‘ಅವಧಿ ಮೀರಿದ ಔಷಧಿಗಳನ್ನು ರೋಗಿಗಳಿಗೆ ನೀಡಲಾಗುತ್ತಿದೆ ಎಂದು ಸ್ಥಳೀಯರಿಂದ ದೂರು ಬಂದಿತ್ತು. ಸಕಾಲದಲ್ಲಿ ವೈದ್ಯರು ಆಸ್ಪತ್ರೆಗೆ ಬರುತ್ತಿಲ್ಲ ಎಂದು ಕೆಲವರು ದೂರವಾಣಿ ಕರೆ ಮಾಡಿ ತಿಳಿಸಿದ್ದರು. ಆಸ್ಪತ್ರೆಯಲ್ಲಿ ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ವೈದ್ಯರು ಸಕಾಲದಲ್ಲಿ ಬರುವಂತೆ ಸೂಚಿಸುತ್ತೇನೆ’ ಎಂದರು.
‘ರಾಜ್ಯ ಸರ್ಕಾರ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಈ ಎರಡು ಕ್ಷೇತ್ರಗಳಿಗೆ ಸಾವಿರಾರು ಕೋಟಿ ವಾರ್ಷಿಕವಾಗಿ ವೆಚ್ಚ ಮಾಡುತ್ತಿದೆ’ ಎಂದು ತಿಳಿಸಿದರು.
‘ಆರೋಗ್ಯವೆಂಬುದು ಎಲ್ಲರಿಗೂ ಅತ್ಯಂತ ಮಹತ್ವದ್ದು. ಆರೋಗ್ಯ ಸೇವೆ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುವಂತಿಲ್ಲ. ಯಾವ ಸಂದರ್ಭದಲ್ಲಿ ಭೇಟಿ ನೀಡುತ್ತೇನೆ ಎಂದು ಹೇಳದೆ ಅನಿರೀಕ್ಷಿತವಾಗಿ ಎಲ್ಲ ಇಲಾಖೆಗಳ ಕಚೇರಿಗೆ ಯಾವುದೇ ಕ್ಷಣದಲ್ಲಿ ಭೇಟಿ ನೀಡಬಹುದು. ಒಂದು ಸಣ್ಣ ಪ್ರಮಾದ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿ ಕಪ್ಪು ಚುಕ್ಕೆಯಾಗಬಾರದು’ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯ ಬಿ.ಎ.ಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಕೆ. ನಾರಾಯಣಸ್ವಾಮಿ, ಕೆ.ವಿ. ಸ್ವಾಮಿ, ಗ್ರಾಮ ಪಂಚಾಯಿತಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಇದ್ದರು.