ಬೆಂಗಳೂರು: ರಾಜ್ಯ ಸರ್ಕಾರ ಕಳೆದ ಎರಡು ಸಚಿವ ಸಂಪುಟ ಸಭೆಗಳಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ತಡೆ ಹಿಡಿಯಬೇಕು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಕಳೆದ 15 ದಿನಗಳಲ್ಲಿ ಹಣಕಾಸು ವ್ಯವಸ್ಥೆ ಇಲ್ಲದೆ, ಗುತ್ತಿಗೆದಾರರು ಯಾರೆಂಬುದೂ ಗೊತ್ತಿಲ್ಲದೆ ಅನೇಕ ಕಾಮಗಾರಿಗಳನ್ನು ತರಾತುರಿಯಲ್ಲಿ ಜಾರಿಗೊಳಿಸಲಾಗುತ್ತಿದೆ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ದೂರಿದರು.
ಎರಡು ದಿನಗಳಲ್ಲಿ ಅನೇಕ ಕಡತಗಳು ವಿಲೇವಾರಿಯಾಗಿದ್ದು, ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕು. ಚುನಾವಣೆ ಸಮೀಪಿಸುವಾಗ ವರ್ಗಾವಣೆ ಮಾಡಬಾರದು ಎಂಬ ನಿರ್ದೇಶನವಿದ್ದರೂ ವರ್ಗಾವಣೆ ದಂಧೆ ನಡೆದಿದೆ ಎಂದು ಹೇಳಿದರು.
ಹಣ ಮಾಡುವ ಉದ್ದೇಶದಿಂದಲೇ ಪ್ರಾಮಾಣಿಕ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಗಣಿ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ ಕಠಾರಿಯಾ ಅವರನ್ನು ರಜೆ ಮೇಲೆ ತೆರಳಲು ಸೂಚಿಸಿರುವುದು ಇದಕ್ಕೆ ಸಾಕ್ಷಿ ಎಂದು ಶೋಭಾ ತಿಳಿಸಿದರು.