ಬೆಳಗಾವಿ: ‘ಕಾವ್ಯದ ಭಾಷೆಯು ಸಂಕೀರ್ಣ ಮತ್ತು ವೈವಿಧ್ಯಮಯ ಅರ್ಥ ವ್ಯಾಪ್ತಿಯುಳ್ಳದ್ದು’ ಎಂದು ಆರ್ಪಿಡಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಹರೀಶ ಕೋಲ್ಕಾರ ಹೇಳಿದರು.
ಜಿಲ್ಲಾ ಲೇಖಕಿಯರ ಸಂಘದಿಂದ ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ದಿ. ಗಂಗಾ ಕಂಬಾರ ದತ್ತಿ ಕಾರ್ಯಕ್ರಮ’ದಲ್ಲಿ ಯಮುನಾ ಕಂಬಾರ ಅವರ ಮೂರು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ‘ಪ್ರೀತಿ ಎಂದರೆ’ ಕೃತಿ ಕುರಿತು ಮಾತನಾಡಿದರು.
‘ನವ್ಯ, ನವ್ಯೋತ್ತರದ ಕಾವ್ಯ ಭಾಷೆಯು ಪ್ರತಿಮಾತ್ಮಕ ಮಾತ್ರವಲ್ಲದೇ ಇಂದಿನ ಸಂಕೀರ್ಣ ಬದುಕಿನ ಪ್ರತಿಬಿಂಬದಂತೆ ಇದೆ. ಕಾವ್ಯಾರಾಧಕರ ಚಿಂತನೆಯ ತೀಕ್ಷ್ಣತೆ, ತೀವ್ರತೆಯನ್ನು ಚುರುಕುಗೊಳಿಸುವಂತಿದೆ. ನಿವೃತ್ತ ಶಿಕ್ಷಕಿ ಯಮುನಾ ಕಂಬಾರ ಅವರ ಕಾವ್ಯವು ಪ್ರಚಲಿತ ವಿದ್ಯಮಾನಗಳ ಧ್ಯಾನಸ್ಥ ಅವಲೋಕನವಾಗಿದೆ. ವ್ಯವಸ್ಥೆಯ ಅಸ್ತವ್ಯಸ್ತ ಸ್ಥಿತಿಯನ್ನು ಸಾಮೂಹಿಕ ಧ್ವನಿಯಾಗಿ ಅಭಿವ್ಯಕ್ತಿಸುವಲ್ಲಿ ಯಶಸ್ವಿಯಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
‘ಎರಡು ಫೈಲುಗಳ ನಡುವೆ’ ಕೃತಿ ಕುರಿತು ಪ್ರಾಚಾರ್ಯೆ ಡಾ.ನಿರ್ಮಲಾ ಬಟ್ಟಲ, ‘ಮೈ ಶ್ಯಾಡೊ’ ಇಂಗ್ಲಿಷ್ ಕೃತಿ ಬಗ್ಗೆ ನಿವೃತ್ತ ಉಪನ್ಯಾಸಕಿ ಡಾ.ಗುರುದೇವಿ ಹುಲೆಪ್ಪನವರಮಠ ಮಾತನಾಡಿದರು.
ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ರಾಮಯ್ಯ ಪುಸ್ತಕಗಳನ್ನು ಬಿಡುಗಡೆ ಮಾಡಿದರು.
ಲೇಖಕಿ ನೀಲಗಂಗಾ ಚರಂತಿಮಠ ಇದ್ದರು. ಲಲಿತಾ ಪರ್ವತಿಕರ ವಚನ ಪ್ರಾರ್ಥನೆ ಸಲ್ಲಿಸಿದರು. ಹಮೀದಾ ಬೇಗಂ ದೇಸಾಯಿ ಸ್ವಾಗತಿಸಿದರು. ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಹೇಮಾ ಸೋನೋಳಿ ಪ್ರಾಸ್ತವಿಕವಾಗಿ ಮಾತನಾಡಿದರು. ಇಂದಿರಾ ಮೋಟೆಬೆನ್ನೂರ ವಂದಿಸಿದರು. ಪ್ರಾಚಾರ್ಯೆ ಡಾ.ರಾಜನಂದಾ ಘಾರ್ಗಿ ನಿರೂಪಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.