ಬೆಳಗಾವಿ: ಕೇಂದ್ರ ಸರ್ಕಾರದ ರಾಷ್ಟ್ರೀಯ ಕೌಟುಂಬಿಕ ನೆರವು ಯೋಜನೆಯಡಿ ಮಂಜೂರಾಗಿದ್ದ ₹ 20,000 ಸಹಾಯಧನ ನೀಡಲು ₹ 1,000 ಲಂಚ ಪಡೆದಿದ್ದ ಗೋಕಾಕ ತಹಶೀಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ನಿಂಗಪ್ಪ ಕರೆಪ್ಪ ಕುಂಬಾರಗೆ ನ್ಯಾಯಾಲಯವು 4 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹ 17,000 ದಂಡ ವಿಧಿಸಿದೆ.
ಸರ್ಕಾರದಿಂದ ಬಂದಿದ್ದ ಸಹಾಯಧನ ನೀಡಲು ಬಾಳವ್ವ ಭೀಮಪ್ಪ ಮಳವಾಡ ಅವರಿಗೆ ಲಂಚ ನೀಡುವಂತೆ ನಿಂಗಪ್ಪ ಒತ್ತಾಯಿಸಿದ್ದ. 2015ರ ಏಪ್ರಿಲ್ 24ರಂದು ಲೋಕಾಯುಕ್ತ ಅಧಿಕಾರಿಗಳು ಬೀಸಿದ್ದ ಬಲೆಗೆ ಸಿಕ್ಕಿಹಾಕಿಕೊಂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ 4ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಶಶಿಧರ ಶೆಟ್ಟಿ ಅವರು ಶುಕ್ರವಾರ ಶಿಕ್ಷೆ ವಿಧಿಸಿ, ಆದೇಶ ನೀಡಿದರು.
ತನಿಖೆ ಕೈಗೊಂಡಿದ್ದ ಲೋಕಾಯುಕ್ತ ಠಾಣೆಯ ಅಂದಿನ ಇನ್ಸ್ಪೆಕ್ಟರ್ ಬಿ.ಎಸ್.ಪಾಟೀಲ ಆರೋಪ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಪ್ರವೀಣ ಅಗಸಗಿ ವಾದ ಮಂಡಿಸಿದ್ದರು.