ಬೆಳಗಾವಿ: ‘2023–24ರ ಹೊತ್ತಿಗೆ ಎಲ್ಲರಿಗೂ ಮನೆ ಸಿಗಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ಏಕಕಾಲದಲ್ಲಿ 905 ಮನೆಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ’ ಎಂದು ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ತಿಳಿಸಿದರು.
ವಸತಿ ಇಲಾಖೆ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಕ್ಷೇತ್ರದಲ್ಲಿ ಮನೆಗಳ ನಿರ್ಮಾಣ ಕಾಮಗಾರಿಗೆ ಶನಿವಾರ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
‘ಅಲಾರವಾಡ ಪ್ರದೇಶಕ್ಕೆ 1,600 ಮನೆಗಳು ಮಂಜೂರಾಗಿವೆ. ನಿರ್ಮಾಣ ಸಮಯದಲ್ಲಿ ಏನೇ ತಕರಾರು ಇದ್ದರೂ ಪರಸ್ಪರ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಾಮಗಾರಿ ವಿಳಂಬ ಆಗಬಾರದು’ ಎಂದು ಹೇಳಿದರು.
ಸಂಸದೆ ಮಂಗಲಾ ಅಂಗಡಿ ಚಾಲನೆ ನೀಡಿದರು.
ನಗರಪಾಲಿಕೆ ಸದಸ್ಯ ರಾಜಶೇಖರ ಡೋಣಿ, ಮುಖಂಡರಾದ ಬಸವರಾಜ ಅಂಚಿ, ಶಿರಗುಪ್ಪಿ ಶೆಟ್ಟರ, ಮಹಾದೇವ ರಾಠೋಡ, ಹಣಮಂತ ಕಾಗಲಕರ, ಗಣೇಶ ಧೆಡೆ ಇದ್ದರು.