ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರದ ಅಭಿವೃದ್ಧಿಗೆ ಅನುದಾನದ ಕೊರತೆ: ಹ್ಯಾಟ್ರಿಕ್‌ ಸಾಧಕ ಸತೀಶ್‌ ರೆಡ್ಡಿ

Last Updated 9 ಜೂನ್ 2018, 19:35 IST
ಅಕ್ಷರ ಗಾತ್ರ

ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಬಿಜೆಪಿಯ ಸತೀಶ್‌ ರೆಡ್ಡಿ ಅವರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ನೋವಿದೆ. ಅದೇನೇ ಇದ್ದರೂ, ಜನ ನಮ್ಮನ್ನು ಆಯ್ಕೆ ಮಾಡಿದ್ದಾರೆ ಕೆಲಸ ಮಾಡಬೇಕು ಎಂಬ ತುಡಿತವೂ ಇದೆ.

* ಕೈಗೆ ಬಂದದ್ದು ಬಾಯಿಗಿಲ್ಲ ಎಂಬಂತಾಯಿತಲ್ಲವೇ? 
ನಮ್ಮ ಪಾಲಿಗೆ ಹಾಗಾದದ್ದು ನಿಜ. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ತಾವು ಜನರ ಋಣದಲ್ಲಿಲ್ಲ. ಕಾಂಗ್ರೆಸ್‌ ಮುಲಾಜಿನಲ್ಲಿದ್ದೇನೆ ಎಂದು ಹೇಳಿದ್ದಾರೆ. ಇದಕ್ಕಿಂತ ವಿಪರ್ಯಾಸ ಇದೆಯೇ ?

* ಹತಾಶೆ ಉಂಟಾಗಿದೆಯೇ? 
ಸಹಜವಾಗಿ ನೋವಾಗಿದೆ. ಆದರೆ, ಇನ್ನು 6 ತಿಂಗಳಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಇದಂತೂ ಖಚಿತ. ನಿತ್ಯದ ಬೆಳವಣಿಗೆಗಳನ್ನು ನೋಡುತ್ತಿದ್ದರೆ, ಈ ವ್ಯವಸ್ಥೆ ಸ್ಥಿರವಾಗಿರುವ ಲಕ್ಷಣ ಕಾಣುತ್ತಿಲ್ಲ. ಆರಂಭದಲ್ಲೇ ಸರ್ಕಾರ ಐಸಿಯುನಲ್ಲಿದೆ. ಅದು ಉಳಿಯುವುದು ಕಷ್ಟ.

* ಮುಂದಿನ ಐದು ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ನೀವು ಏನು ಮಾಡುತ್ತೀರಿ? 
 ನಮ್ಮ ಮುಂದೆ ದೊಡ್ಡ ಸವಾಲಿದೆ. ಈ ಹಿಂದೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷನಾಗಿದ್ದೆ. ಎರಡು ಬಾರಿ ಶಾಸಕನಾಗಿದ್ದೆ. ಅಂದಿಗೂ ಇಂದಿಗೂ ಬಹಳ ವ್ಯತ್ಯಾಸ ಇದೆ. ನಗರದ ಜನಸಂಖ್ಯೆ ಹೆಚ್ಚಾಗಿದೆ. ಸಮಸ್ಯೆಗಳೂ ಬಹಳಷ್ಟಿವೆ. ಮುಂದಿನ ಹತ್ತು ವರ್ಷಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಬೇಕಿದೆ. ನೀರಿಗಾಗಿ ಪರ್ಯಾಯ ಮಾರ್ಗಗಳನ್ನು ಹುಡುಕಲೇಬೇಕಾಗಿದೆ. ಸ್ವಚ್ಛತೆ, ರಸ್ತೆ ನಿರ್ವಹಣೆ ಸೇರಿದಂತೆ ಹಲವಾರು ಸವಾಲುಗಳಿವೆ. ಹಂತಹಂತವಾಗಿ ಇವುಗಳನ್ನು ಪರಿಹರಿಸಬೇಕು.

* ಕ್ಷೇತ್ರದಲ್ಲಿರುವ ಸಮಸ್ಯೆಗಳೇನು? 
ಈಗಾಗಲೇ ಹೇಳಿದಂತೆ ಕುಡಿಯುವ ನೀರು, ಟ್ರಾಫಿಕ್‌ ಸಮಸ್ಯೆಯನ್ನು ನಿವಾರಿಸಬೇಕು. ರಸ್ತೆಗಳನ್ನು ವಿಸ್ತರಿಸಬೇಕು. ಕ್ಷೇತ್ರದಲ್ಲಿ 5 ಕೆರೆಗಳ ಅಭಿವೃದ್ಧಿ ಆಗಿದೆ. ಇನ್ನು 4 ಆಗಬೇಕಿದೆ. ನ್ಯಾನಪ್ಪನಹಳ್ಳಿಯಲ್ಲಿ 18 ಎಕರೆ ಪ್ರದೇಶದಲ್ಲಿ ಕಸ ಸುರಿಯಲಾಗುತ್ತಿತ್ತು. ಅದನ್ನು ಸ್ವಚ್ಛ ಮಾಡಿದ್ದೇವೆ. ಈ ಜಾಗದಲ್ಲಿ ಎಲ್ಲ ಸರ್ಕಾರಿ ಶಾಲೆಗಳಿಗೆ ಅನುಕೂಲವಾಗುವಂತೆ ಅಂತರ ರಾಷ್ಟ್ರೀಯ ಕ್ರೀಡಾಂಗಣ ನಿರ್ಮಿಸಲಾಗುವುದು. ಬನ್ನೇರುಘಟ್ಟ – ಹೊಸೂರು ರಸ್ತೆಯಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿ ವೇಗವನ್ನು ಹೆಚ್ಚಿಸಬೇಕು.  ಆದರೆ, ಅದಕ್ಕೆ ಬೇಕಾಗುವಷ್ಟು ದುಡ್ಡು ಸಿಗುತ್ತಿಲ್ಲ. ಹಿಂದಿನ ಸರ್ಕಾರದಲ್ಲಿ ಕಾಂಗ್ರೆಸ್‌ನ ಕೆಲವೇ ಶಾಸಕರು ಎಲ್ಲ ಹಣವನ್ನೂ ಬಾಚಿಕೊಂಡುಬಿಟ್ಟರು.

ಗಾರ್ಮೆಂಟ್‌ ಉದ್ಯಮಿಗಳಿಗೆ ಒಂದಿಷ್ಟು ಸರ್ಕಾರದ ಸೌಲಭ್ಯ, ಕಾರ್ಮಿಕರಿಗಾಗಿ ಹಾಸ್ಟೆಲ್‌ ನಿರ್ಮಿಸಬೇಕು. ಕೊಳೆಗೇರಿಗಳನ್ನು ತೆರವು ಮಾಡಿ ಅಲ್ಲಿನ ಜನರಿಗೆ ಒಳ್ಳೆಯ ವಸತಿ ನಿರ್ಮಿಸಿಕೊಡಬೇಕು. ಸಾಫ್ಟ್‌ವೇರ್‌ ಕ್ಷೇತ್ರದವರ ನೆರವು ಪಡೆದು ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಕೊಳ್ಳಬೇಕು.

* ರಾಜಕೀಯ ದೃಷ್ಟಿಯ ಸವಾಲುಗಳೇನು? 
ಹಿಂದಿನ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಹಣ ಬಿಡುಗಡೆ ಮಾಡಲೇ ಇಲ್ಲ. ನಗರಾಭಿವೃದ್ಧಿ ಸಚಿವರಾಗಿದ್ದ ಕೆ.ಜೆ. ಜಾರ್ಜ್‌ ಅಷ್ಟೊಂದು ಕಾಳಜಿ ತೋರಲಿಲ್ಲ. ಕಾಂಗ್ರೆಸ್ಸೇತರ ಶಾಸಕರು ಸಹಜವಾಗಿ ತಾರತಮ್ಯ ಎದುರಿಸಬೇಕಾಯಿತು. ಈ ಸಲ ಹೀಗಾಗದಂತೆ ಹೋರಾಟ ನಡೆಸಬೇಕಿದೆ.

* ಜನ ಯಾವ ಕಾರಣಕ್ಕೆ ನಿಮ್ಮನ್ನು ಗೆಲ್ಲಿಸಿದ್ದಾರೆ?
ನಾನು ಜನರಿಗೆ ಯಾವುದೇ ಹೊತ್ತಿನಲ್ಲೂ ಸಿಗುತ್ತೇನೆ. ತಕ್ಷಣ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಅಂಥ ನೆಟ್‌ವರ್ಕ್‌ ನನ್ನಲ್ಲಿದೆ. ಸ್ವಚ್ಛತೆ, ತ್ಯಾಜ್ಯ ವಿಲೇವಾರಿ ಸಮಸ್ಯೆ ಇರುವುದು ನಿಜ, ಜನ ಸಮಸ್ಯೆಗಳನ್ನು ತೆಗೆದುಕೊಂಡು ಬರುತ್ತಾರೆ.  ನಾನಾಗಲಿ, ನನ್ನ ಕ್ಷೇತ್ರದ ಕಾರ್ಪೊರೇಟರ್‌ಗಳ ಮೂಲಕವಾಗಲಿ ತಕ್ಷಣ ಸಮಸ್ಯೆಗಳನ್ನು ಪರಿಹರಿಸುತ್ತೇನೆ. ನನ್ನ ಗೆಲುವಿನ ಹಿಂದೆ ಕಾರ್ಯಕರ್ತರು, ಪಾಲಿಕೆ ಸದಸ್ಯರು, ಪಕ್ಷದ ನಾಯಕರು... ಹೀಗೆ ಎಲ್ಲರ ಪರಿಶ್ರಮವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT