ಬೆಳಗಾವಿ: ‘ಮಹದಾಯಿ ಯೋಜನೆ ಅನುಷ್ಠಾನಕ್ಕೆ ಪೂರ್ವ ಸಿದ್ಧತಾ ವರದಿಗೆ ಅನುಮೋದನೆ ಪಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಜಲಶಕ್ತಿ ಸಚಿವರ ಗಮನಸೆಳೆಯಲಾಗಿದೆ’ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ಇಲ್ಲಿ ಪತ್ರಕರ್ತರೊಂದಿಗೆ ಮಂಗಳವಾರ ಮಾತನಾಡಿದ ಅವರು, ‘ಯಾವುದೇ ಯೋಜನೆ ಕೈಗೆತ್ತಿಕೊಳ್ಳುವ ಮುನ್ನ ಈ ವರದಿಗೆ (ಪ್ರಿ ಫೀಸಿಬಿಲಿಟಿ ರಿಪೋರ್ಟ್) ಅನುಮೋದನೆ ಬೇಕಾಗುತ್ತದೆ’ ಎಂದರು.
‘ಈ ವಿಷಯವಾಗಿ ನಾನು ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸಚಿವರನ್ನು ಭೇಟಿಯಾಗಿ ಚರ್ಚಿಸಿದ್ದೇವೆ. ಶೀಘ್ರವೇ ಅನುಮೋದನೆ ಕೊಡುವುದಾಗಿ ಸಚಿವರು ಭರವಸೆ ಕೊಟ್ಟಿದ್ದಾರೆ’ ಎಂದು ಹೇಳಿದರು.
‘ಮಹದಾಯಿ ವಿವಾದ ಬಗೆಹರಿಸಲು ನಾವು ಕ್ರಮ ವಹಿಸಿದ್ದೇವೆ. ನಮ್ಮ ಸರ್ಕಾರದಲ್ಲೆ ಅನುಷ್ಠಾನಗೊಳಿಸುತ್ತೇವೆ. ಈ ವಿಷಯವಾಗಿ ಹೋರಾಟ ನಡೆಸುವುದಕ್ಕೆ ಕಾಂಗ್ರೆಸ್ನವರಿಗೆ ಯಾವುದೇ ನೈತಿಕ ಹಕ್ಕಿಲ್ಲ’ ಎಂದರು.