ಬೆಳಗಾವಿ: ‘ತಿಂಗಳಿಗೆ ₹ 12ಸಾವಿರ ವೇತನ ನಿಗದಿಪಡಿಸಬೇಕು ಹಾಗೂ ಬಾಕಿ ಪ್ರೋತ್ಸಾಹಧನವನ್ನು ಕೂಡಲೇ ಬಿಡುಗಡೆ ಮಾಡಬೇಕು’ ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಜಿಲ್ಲಾ ಸಮಿತಿಯವರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಸರ್ದಾರ್ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು.
‘ಆರೋಗ್ಯ ಇಲಾಖೆ ಹಾಗೂ ಜನರ ಸಂಪರ್ಕ ಸೇತುವಾಗಿ ಕಾರ್ಯನಿರ್ವಹಿಸುತ್ತಿರುವ ನಮಗೆ ಅತ್ಯಂತ ಕಡಿಮೆ ವೇತನ ನೀಡಲಾಗುತ್ತಿದೆ. ಕೊರೊನಾ ಸೋಂಕಿನ ಸಂದರ್ಭದಲ್ಲೂ ಪ್ರಾಣವನ್ನೂ ಲೆಕ್ಕಸಿದೆ ಕೆಲಸ ಮಾಡುತ್ತಿದ್ದರೂ ಗೌರವ ದೊರೆಯುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಈ ಹಿಂದೆ ನೀಡಿದ ಭರವಸೆಯಂತೆ ವೇತನ ನಿಗದಿಪಡಿಸಬೇಕು. ಕಾಲ ಕಾಲಕ್ಕೆ ಎಲ್ಲ ಕಾರ್ಯಕರ್ತರ ಆರೋಗ್ಯ ತಪಾಸಣೆ ಮಾಡಬೇಕು. ಅಗತ್ಯವಿದ್ದಲ್ಲಿ ಸೂಕ್ತ ಚಿಕಿತ್ಸೆ ಒದಗಿಸಬೇಕು. ಮಾಸ್ಕ್, ಸ್ಯಾನಿಟೈಸರ್, ಫೇಸ್ ಶೀಲ್ದ್, ಗ್ಲೌಸ್ ಮೊದಲಾದ ಸುರಕ್ಷಾ ಸಾಮಗ್ರಿಗಳನ್ನು ಆಗಾಗ ವಿತರಿಸಬೇಕು. ಘೋಷಣೆಯಂತೆ ಕೋವಿಡ್ ವಿಶೇಷ ಪ್ರೋತ್ಸಾಹ ಧನ ₹ 3ಸಾವಿರ ಎಲ್ಲರಿಗೂ ತಲುಪುವಂತೆ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣ ಜಡಗನ್ನವರ, ಕಾರ್ಯದರ್ಶಿ ಗೀತಾ ರಾಯಗೋಳ, ಉಪಾಧ್ಯಕ್ಷರಾದ ರೂಪಾ ಅಂಗಡಿ, ಭಾರತಿ ಮಾಶಾಳ, ಸುಜಾತಾ ಕಾಡಮಠ, ಜಯಶ್ರೀ ನಾವಿ, ಲತಾ ಜಾಧವ ನೇತೃತ್ವ ವಹಿಸಿದ್ದರು.