ಬೆಳಗಾವಿ: ಮನೆ ಮನೆಗಳಿಗೆ ತೆರಳಿ ಇ–ಸಮೀಕ್ಷೆ ಕಾರ್ಯನಿರ್ವಹಿಸಲು ವಿರೋಧ ವ್ಯಕ್ತಪಡಿಸಿ ಆಶಾ ಕಾರ್ಯಕರ್ತರು ಇಲ್ಲಿನ ಸರ್ದಾರ್ ಪ್ರೌಢಶಾಲೆ ಮೈದಾನದಲ್ಲಿ ಗುರುವಾರ ಪ್ರತಿಭಟನೆ ನಡೆಸಿ, ಜಿಲ್ಲಾ ಪಂಚಾಯ್ತಿ ಸಿಇಒ ಎಚ್.ವಿ. ದರ್ಶನ್ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಜಿಲ್ಲಾ ಸಮಿತಿ ಮತ್ತು ಎಐಟಿಯುಸಿ ನೇತೃತ್ವದಲ್ಲಿ ಸೇರಿದ್ದ ಅವರು, ‘ಮನೆ ಮನೆಗಳಿಗೆ ಭೇಟಿ ನೀಡಿ ಇ–ಸಮೀಕ್ಷೆ ಮಾಡಲು ಮೊಬೈಲ್ ಅಥವಾ ಟ್ಯಾಬ್ ಜೊತೆ ಇಂಟರ್ನೆಟ್ ಡೇಟಾ ಒದಗಿಸಬೇಕು. ಯಾರಿಗೆ ಬಳಸಲು ತಿಳಿದಿಲ್ಲವೋ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಈ ಕಾರ್ಯನಿರ್ವಹಿಸುವವರಿಗೆ ಸೂಕ್ತ ಸಂಭಾವನೆ ನಿಗದಿಪಡಿಸಬೇಕು. ಒತ್ತಡ ಮಾಡದೆ ಅಗತ್ಯವಿರುವಷ್ಟು ಸಮಯ ನೀಡಬೇಕು. ಆರ್ಥಿಕ ಮಾಹಿತಿ ದಾಖಲಿಸುವುದನ್ನು ಸಮೀಕ್ಷೆಯಿಂದ ಕೈಬಿಡಬೇಕು’ ಎಂದು ಒತ್ತಾಯಿಸಿದರು.
‘ಜಿಲ್ಲೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಕುಂದುಕೊರತೆ ನಿವಾರಣಾ ಸಭೆಯನ್ನು ಕೂಡಲೇ ನಡೆಸಬೇಕು’ ಎಂದು ಆಗ್ರಹಿಸಿದರು.
‘ಹಲವು ಜಿಲ್ಲೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಇ-ಸಮೀಕ್ಷೆಗೆ ಒಪ್ಪಿಲ್ಲ. ಕೊನೆಗೆ ಆಶಾ ಕಾರ್ಯಕರ್ತೆಯರಷ್ಟೇ ಪಾಲ್ಗೊಳ್ಳಬೇಕಾಗುತ್ತದೆ. ಅವರಿಗೆ ಮೊಬೈಲ್ ಮತ್ತು ಡೇಟಾ ನೀಡದೆ ಒತ್ತಾಯ ಹೇರಲು ಸಿಬ್ಬಂದಿ ಮುಂದಾಗಿದ್ದಾರೆ. ಸ್ಮಾರ್ಟ್ ಮೊಬೈಲ್ ಫೋನ್ ಖರೀದಿಸಿಕೊಂಡು ಬರುವಂತೆ ತಿಳಿಸುತ್ತಿದ್ದಾರೆ. ಪತಿ ಅಥವಾ ಮಕ್ಕಳ ಮೊಬೈಲ್ ಫೋನ್ ಬಳಸುವಂತೆ ಸೂಚಿಸುತ್ತಿದ್ದಾರೆ. ಇಲ್ಲವೇ ಕೆಲಸ ಬಿಡಿ ಎನ್ನುತ್ತಿದ್ದಾರೆ. ಇದು ಖಂಡನೀಯ. ಇಲಾಖೆ ಕೆಲಸಕ್ಕೆ ಇಲಾಖೆಯಿಂದ ಸೂಕ್ತ ವ್ಯವಸ್ಥೆ ಮಾಡಬೇಕು’ ಎಂದು ಒತ್ತಾಯಿಸಿದರು.
ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ, ಜಿಲ್ಲಾ ಸಮಿತಿ ಅಧ್ಯಕ್ಷ ಲಕ್ಷ್ಮಣ ಜಡಗನ್ನವರ, ಜಿಲ್ಲಾ ಘಟಕದ ಕಾರ್ಯದರ್ಶಿ ರೂಪಾ ರಾಯಗೊಳ, ಸುಜಾತಾ ಕಾಡಮಠ, ರೂಪಾ ಅಂಗಡಿ, ಭಾರತಿ ಮಾಶಾಳ, ಲತಾ ಜಾಧವ ಭಾಗವಹಿಸಿದ್ದರು.