ಬೆಳಗಾವಿ: ‘ಹೊರನಾಡ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಮನ ಹರಿಸಿದ್ದಾರೆ. ನಿಮ್ಮ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರೆಯುವ ವಿಶ್ವಾಸವಿದೆ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹೇಳಿದರು.
ಗೋವಾದ ಪಣಜಿ ಬಳಿಯ ಪರಿವರಿಯಲ್ಲಿ ಸೂರ್ಯೋದಯ ಕನ್ನಡ ಸಂಘ ಭಾನುವಾರ ಆಯೋಜಿಸಿದ್ದ ‘ಮಧುರ ಮಧುರವೀ ಮಂಜುಳಗಾನ’ ಕಾರ್ಯಕ್ರಮದಲ್ಲಿ ‘ಗಡಿನಾಡ ಕನ್ನಡಿಗರ ರಕ್ಷಕ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
‘ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಆರು ರಾಜ್ಯಗಳ ಕನ್ನಡಿಗರ ಪ್ರಾತಿನಿಧಿಕ ಸಭೆ ನಡೆಸಿ, ಹೊರನಾಡ ಕನ್ನಡಿಗರ ಶೈಕ್ಷಣಿಕ ಹಾಗೂ ಔದ್ಯೋಗಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿದೆ. ಈ ಕುರಿತ ಸಮಗ್ರವಾದ ವರದಿಯನ್ನು ಇತ್ತೀಚೆಗೆ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ’ ಎಂದರು.
ಗೋವಾದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಣ್ಣ ಮೇಟಿ, ಗೋವಾದ ಕನ್ನಡಿಗರಿಗೆ ಕನ್ನಡ ಭವನದ ಅವಶ್ಯಕತೆಯಿದೆ. ನಾವು ನಡೆಸುತ್ತಿರುವ ಹೋರಾಟಕ್ಕೆ ಕರ್ನಾಟಕದ ಕನ್ನಡ ಸಂಘಟನೆಗಳು ಕೈಜೋಡಿಸಬೇಕು’ ಎಂದು ಕೋರಿದರು.
ಕರ್ನಾಟಕ ವಿ.ವಿ ಸಿಂಡಿಕೇಟ್ ಸದಸ್ಯ ಡಾ.ಕಲ್ಮೇಶ ಹಾವರಪೇಟ, ನೀಲಮ್ಮ ಮೇಟಿ, ಗಂಗಯ್ಯ ಹಿರೇಮಠ, ಬಸವರಾಜ ಮೇಟಿ, ಪರಶುರಾಮ ಕಲಿವಾಳ, ಪ್ರಕಾಶ ಭಟ್ ಉಪಸ್ಥಿತರಿದ್ದರು.