ಗೋಕಾಕ: ಮತ ಕ್ಷೇತ್ರದ ಉಪಚುನಾವಣೆಯಲ್ಲಿ ಅಶೋಕ ಪೂಜಾರಿ ಸ್ಪರ್ಧಿಸಬೇಕು ಎಂದು ಆಗ್ರಹಿಸಿ ಅವರ ಬೆಂಬಲಿಗರು ಭಾನುವಾರ ಧರಣಿ ನಡೆಸಿದರು.
ಇಲ್ಲಿನ ಅಂಬಿಗೇರ ಗಲ್ಲಿಯಲ್ಲಿರುವ ಮನೆ ಆವರಣದಲ್ಲಿ ದಸ್ತಗೀರ ಪೈಲ್ವಾನ ನೇತೃತ್ವದಲ್ಲಿ ಜಮಾಯಿಸಿದ ಬೆಂಬಲಿಗರು, ಪೂಜಾರಿ ಪರ ಜಯ ಘೋಷಣೆಗಳನ್ನು ಕೂಗಿದರು. ‘ಸ್ಪರ್ಧೆಯಿಂದ ಹಿಂದೆ ಸರಿಯಬಾರದು. ಸ್ವತಂತ್ರ ಅಭ್ಯರ್ಥಿಯಾಗಿಯಾದರೂ ಕಣಕ್ಕಿಳಿಯಬೇಕು’ ಎಂದು ಒತ್ತಾಯಿಸಿದರು.
ವಕೀಲ ಎಂ.ಎ. ಪೀರಜಾದೆ, ಕಲ್ಲಯ್ಯ ಮಠಪತಿ, ಈರಣ್ಣ ಹಿರೇಮಠ, ಬಿಲಾಲ ಕಲ್ಲೋಳಿ, ಚಂದ್ರಶೇಖರ ಬಬಲಿ, ಗುರು ಬೆನವಾಡ, ಅನಿಲ ಸಂಕಾವಿ, ನಾಗು ದೇಸಾಯಿ, ಮಂಜುನಾಥ ಪಾಟೀಲ, ರವಿ ಮಡಿವಾಳ ಇದ್ದರು.
ಧರಣಿಯಲ್ಲಿ ಪಾಲ್ಗೊಂಡಿದ್ದ ಯುವಕನೊಬ್ಬ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಭಾವಚಿತ್ರವಿದ್ದ ಟಿ ಶರ್ಟ್ ಧರಿಸಿದ್ದು ಗಮನಸೆಳೆಯಿತು.