ಚನ್ನಮ್ಮನ ಕಿತ್ತೂರು: ಸಾಮಾಜಿಕ ಸಮಸ್ಯೆಗಳ ಬಗ್ಗೆ ಕುಂಚದ ಮೂಲಕ ಜಾಗೃತಿ ಮೂಡಿಸುತ್ತಿರುವ ತಾಲ್ಲೂಕಿನ ಹೊಳಿಹೊಸೂರು ಗ್ರಾಮದ ದೇಮಪ್ಪ ಬಸವಂತಪ್ಪ ಮೆಳವಂಕಿ ಅವರು ಚಿತ್ರರಚನೆಯನ್ನು ವೃತ್ತಿ ಮತ್ತು ಪ್ರವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ.
ಕಲೆಯಲ್ಲಿ ಡಿಪ್ಲೊಮಾ (ಆರ್ಟ್ ಮಾಸ್ಟರ್ ಗ್ರ್ಯಾಜುಯೇಟ್) ಮಾಡಿರುವ ಅವರು ರಚಿಸುವ ಜಲವರ್ಣದ ರಚನೆಗಳು ನೋಡುಗರ ಮನದಾಳಕ್ಕಿಳಿದು ವಿಮರ್ಶೆಗೆ ಹಚ್ಚುತ್ತವೆ.
ಖಾನಾಪುರ ತಾಲ್ಲೂಕಿನ ಹಿರೇಮುನವಳ್ಳಿ ಪ್ರೌಢಶಾಲೆಯಲ್ಲಿ ಕಲಾ ಶಿಕ್ಷಣ ಶಿಕ್ಷಕರಾಗಿ ಮೆಳವಂಕಿ ಕೆಲಸ ಮಾಡುತ್ತಿದ್ದಾರೆ. ಗ್ರಾಫಿಕ್ಸ್ ಡಿಸೈನ್, ಭಿತ್ತಿಪತ್ರ ರಚನೆ ಮತ್ತು ಹವ್ಯಾಸಿ ಛಾಯಾಚಿತ್ರಗಾರರಾಗಿಯೂ ಸಾಧನೆ ಮಾಡಿದ್ದಾರೆ.
2002ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಹೊದ್ಕೆಶಿರೂರ ಪ್ರೌಢಶಾಲೆಯಲ್ಲಿ ಶಿಕ್ಷಕ ವೃತ್ತಿ ಸೇರಿ ಅಲ್ಲಿ 5 ವರ್ಷ ಕಾರ್ಯನಿರ್ವಹಿಸಿದರು. ಬೈಲಹೊಂಗಲ ತಾಲ್ಲೂಕಿನ ತುರಕರಶೀಗಿಹಳ್ಳಿ ಪ್ರೌಢಶಾಲೆ, 2011ರಿಂದ ಖಾನಾಪುರ ತಾಲ್ಲೂಕಿನ ಹಿರೇಮುನವಳ್ಳಿಯಲ್ಲಿ ಕಲಾಶಿಕ್ಷಣ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನೇಕ ವೇದಿಕೆಗಳಲ್ಲಿ ಅವರ ಜಲವರ್ಣ ಚಿತ್ರಗಳು ಪ್ರದರ್ಶನಗೊಂಡು ಮೆಚ್ಚುಗೆ ನೋಡುಗರ ಮೆಚ್ಚುಗೆ ಗಳಿಸಿವೆ.
ಮುಡಿಗೇರಿದ ಪ್ರಶಸ್ತಿ, ಗೌರವ:ವರದಕ್ಷಿಣೆ, ಹೆಣ್ಣಿನ ಶೋಷಣೆ, ಮಾದಕ ಪಾನೀಯ ದುಷ್ಪರಿಣಾಮ, ದಿನದಲಿತರ ಮೇಲಿನ ದೌರ್ಜನ್ಯ, ಅನಕ್ಷರತೆ ಬಿಂಬಿಸುವ ಚಿತ್ರಗಳಿಗೆ ಹೆಚ್ಚಿನ ಆದ್ಯತೆಯನ್ನು ರಚನೆಯಲ್ಲಿ ನೀಡಿದ್ದಾರೆ.
ಬೆಂಗಳೂರಿನ ಕರ್ನಾಟಕ ಪ್ರತಿಭಾ ಅಕಾಡೆಮಿಯ ‘ಆದರ್ಶ ಶಿಕ್ಷಕ’, ‘ಸತೀಶ ಶುಗರ್ ಅವಾರ್ಡ್ಸ್’ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಇವರ ಯಶಸ್ಸಿ ಕಲಾ ಪಯಣದ ಹಿಂದೆ ನಿರಂತರ ಶ್ರಮ, ಸೃಜನಶೀಲತೆ, ಪ್ರಯೋಗಶೀಲತೆ ಇದೆ.
‘ಕಲೆ ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ. ಆದರೆ, ಕೆಲವರನ್ನು ಮಾತ್ರ ಆಯ್ಕೆ ಮಾಡುತ್ತದೆ ಎಂಬ ಮಾತಿದೆ. ಈ ಕಲೆಯಲ್ಲಿ ನನ್ನ ಕೈಹಿಡಿದು ತಿದ್ದಿ ತೀಡಿರುವ ಗುರು ವೈ.ಬಿ. ಮುರಕಿಬಾವಿ ಅವರನ್ನು ಕೃತಜ್ಞತಾ ಭಾವದಿಂದ ನೆನೆಯುತ್ತೇನೆ’ ಎನ್ನುತ್ತಾರೆ.