ಬೆಳಗಾವಿ: ‘ಮೂಢ ನಂಬಿಕೆ ಹಾಗೂ ಮಾನವೀಯತೆ ವಿರೋಧಿ ಸಂಪ್ರದಾಯಗಳಿಂದ ಜನರು ಹೊರಬರಬೇಕು. ವೈಚಾರಿಕ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಅಧ್ಯಕ್ಷ ಸಿದಗೌಡ ಮೋದಗಿ ಸಲಹೆ ನೀಡಿದರು.
ಬಸವ ಭೀಮ ಸೇನೆಯ ವತಿಯಿಂದ ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ನಡೆದ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ, ಮನುವಾದ ಸಮಾಜ ಪರಿವರ್ತನಾ ಸಮಾವೇಶ ಹಾಗೂ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಧರ್ಮ ಮತ್ತು ಸಂಪ್ರದಾಯಗಳ ಹೆಸರಿನಲ್ಲಿ ಮಹಿಳೆಯರು, ಮಕ್ಕಳು ಮತ್ತು ಯುವಕರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ನಿಲ್ಲಬೇಕು. ಎಲ್ಲರೂ ಬಸವಾದಿ ಶರಣರು ತೋರಿದ ಸಮಾನತೆಯ ಮಾರ್ಗದಲ್ಲಿ ನಡೆಯುವ ಮೂಲಕ ಸಶಕ್ತ ಸಮಾಜ ಕಟ್ಟಬೇಕು. ಬಸವಣ್ಣ ಕಟ್ಟಿದ ಅನುಭವ ಮಂಟಪ ನಮ್ಮೆಲ್ಲರಿಗೂ ಮಾದರಿ ಮತ್ತು ಪ್ರೇರಣೆಯಾಗಿದೆ. ಶರಣರು ತೋರಿದ ಮಾರ್ಗದಲ್ಲಿ ರೈತ ಸಂಘಟನೆ ಬಲಪಡಿಸಲಾಗುತ್ತಿದೆ. ಎಲ್ಲ ಕಾಯಕ ಜೀವಿಗಳೊಂದಿಗೆ ಸೇರಿ ರೈತ ಹೋರಾಟಕ್ಕೆ ಹೊಸ ಆಯಾಮ ನೀಡುವ ಚಿಂತನೆ ನಡೆದಿದೆ’ ಎಂದರು.
ಸೇನೆ ಅಧ್ಯಕ್ಷ ಆರ್.ಎಸ್. ದರ್ಗೆ ಮಾತನಾಡಿ, ‘ಕಲ್ಪಿತ ದೇವರುಗಳ ಜಾಗದಲ್ಲಿ ಸಮಾಜದ ದೇವರುಗಳ ಪ್ರತಿಷ್ಠಾಪನೆಯಾಗಬೇಕು. ಬಸವ ಸಮಾಜದ ಮನೆಗಳಲ್ಲಿ ಸರಸ್ವತಿ-ಲಕ್ಷ್ಮೀಯರ ಜಾಗದಲ್ಲಿ ಅಕ್ಕಮಹಾದೇವಿ ಮತ್ತು ಸಾವಿತ್ರಿಬಾಯಿ ಫುಲೆ ಫೋಟೊಗಳು ಬರಬೇಕು. ದೇವರುಗಳ ಮತ್ತು ಸಂಪ್ರದಾಯದ ಭಯದಿಂದ ಮುಕ್ತವಾದ ಸಮಾಜ ನಿರ್ಮಾಣವಾಗಬೇಕು. ಅಕ್ಕಮಹಾದೇವಿಯನ್ನು ನಾಡದೇವತೆ ಎಂದು ಸರ್ಕಾರ ಘೋಷಿಸಬೇಕು’ ಎಂದು ಒತ್ತಾಯಿಸಿದರು.
ಶೋಭಾ ಕ್ಷೀರಸಾಗರ, ಜಯಶ್ರೀ ಕಡಗೋಳ, ಉಮಾ ಅಂಗಡಿ, ಮಹಾದೇವಿ ಪಾಟೀಲ, ವಿಜಯಪುರ ಮತ್ತು ಜ್ಯೋತಿ ಬದಾಮಿ ಅವರಿಗೆ ‘ಅಕ್ಷರ ತಾಯಿ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ’, ನಾಗರತ್ನಾ ರಾಮನಗೌಡ ಮತ್ತು ರೂಪಾ ಕೂಡಲಗಿಮಠ ಅವರಿಗೆ ‘ನಾರಿಕುಲ ಚೇತನ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ’ ಹಾಗೂ ಸುಶೀಲಾ ಲಕ್ಷ್ಮೀಕಾಂತ ಗುರವ ದಂಪತಿಗೆ ‘ಸಾವಿತ್ರಿಬಾಯಿ ಜ್ಯೋತಿಭಾ ಫುಲೆ ಆದರ್ಶ ದಂಪತಿ’ ಎಂದು ಪ್ರಶಸ್ತಿ ನೀಡಲಾಯಿತು.