ಬೆಳಗಾವಿ: ‘ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಡಿ. 22ರಂದು ಬೃಹತ್ ಸಮಾವೇಶ ನಡೆಯುವುದು ಶತಸಿದ್ಧ. ಬುತ್ತಿ ಕಟ್ಟಿಕೊಂಡು ಬರುವ ನಮ್ಮ ಜನ ಸುವರ್ಣ ವಿಧಾನಸೌಧ ಬಿಟ್ಟು ಕದಲುವುದಿಲ್ಲ. ಮೀಸಲಾತಿ ಪಡೆದೇ ಮನೆಗೆ ಹೋಗುತ್ತೇವೆ’ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಸುವರ್ಣ ಸೌಧದ ಬಳಿ ಸಮಾವೇಶಕ್ಕೆ ಗುರುತಿಸಿದ ಜಾಗದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಇಲ್ಲಿ ನೂರು ಎಕರೆಯಷ್ಟು ವಿಶಾಲ ಜಾಗ ಸಿದ್ಧಮಾಡಿದ್ದೇವೆ. ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷ ಎ.ಬಿ.ಪಾಟೀಲ ಅವರು ಜಾಗ ಗುರುತಿಸಿದ್ದಾರೆ. ಹರಿಹರದ ಮಾಜಿ ಶಾಸಕ ಶಿವಂಶಕರ ಅವರು 1000 ಕ್ವಿಂಟಲ್ ಅಕ್ಕಿ ತರಿಸಿದ್ದಾರೆ. ಸಿ.ಸಿ. ಪಾಟೀಲ ಅವರು ಪದಾರ್ಥ ತರಿಸಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಕಾಶಪ್ಪನವರ, ಜಿಲ್ಲಾ ಘಟಕದ ಅಧ್ಯಕ್ಷ ಆರ್.ಕೆ.ಪಾಟೀಲ ಎಲ್ಲರೂ ಸಿದ್ಧತೆ ಮಾಡಿದ್ದಾರೆ. ಸಮಾಜದ ಜನ ಯಾವುದೇ ಹಿಂಜರಿಕೆ ಪಡೆದೇ ಬನ್ನಿ ಕರೆ ನೀಡಿದರು’ ಎಂದರು.
‘ಕನಿಷ್ಠ 20 ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ವೇದಿಕೆಗೆ ರಾಣಿ ಚನ್ನಮ್ಮನ ಹೆಸರು, ಮಹಾದ್ವಾರಕ್ಮೆ ಬೆಳವಡಿ ಮಲ್ಲಮ್ಮನ ಹೆಸರು, ಪ್ರದೇಶಕ್ಕೆ ರಾವ್ ಬಹಾದ್ದೂರ ಅರಟಾಳ ರುದ್ರಗೌಡರ ಹೆಸರು ಇಡಲಾಗಿದೆ. ಲಿಂಗಾಯತ ಪಂಚಮಸಾಲಿ ಸಮಾಜದ ಐದೂ ಪಂಗಡಗಳ ಜನ ಸೇರುವ ಕಾರಣ ‘ವಿರಾಟ ಪಂಚಶಕ್ತಿ’ ಹೋರಾಟ ಎಂದು ಕರೆಯಲಾಗಿದೆ’ ಎಂದರು.
ಸಮಾವೇಶ ವಿಫಲಗೊಳಿಸುವ ಉದ್ದೇಶದಿಂದ ಆಯಾ ಜಿಲ್ಲೆಗಳ ಗಡಿಯಲ್ಲೇ ಜನರನ್ನು ತಡೆಯಲು ಬ್ಯಾರಿಕೇಡ್ ಹಾಕಲಾಗುತ್ತಿದೆ ಎಂಬ ಮಾಹಿತಿ ಬಂದಿದೆ. ನಾವು ಶಾಂತರೀತಿಯ ಹೋರಾಟ ಮಾಡುವವರು. ಯಾರನ್ನೂ ತಡೆಯಕೂಡದ ಎಂದೂ ಅವರು ಹೇಳಿದರು.
’ಗುರುವಾರ ಬೆಳಿಗ್ಗೆ 11ಕ್ಕೆ ಸಮಾವೇಶ ಆರಂಭವಾಗುತ್ತದೆ. ಮೀಸಲಾತಿ ಘೋಷಿಸಿದರೆ ಮುಖ್ಯಮಂತ್ರಿ ಅವರನ್ನು ಕರೆದು ಕಲ್ಲುಸಕ್ಕರೆ ತುಲಾಭಾರ ಮಾಡಿ, ಸಿಹಿ ತಿನ್ನಿಸುತ್ತೇವೆ. ಇಲ್ಲದಿದ್ದರೆ ಬಂಡಾಯದ ಧ್ವಜ ಎತ್ತುತ್ತೇವೆ ಎಂದರು.
‘ಮುಖ್ಯಮಂತ್ರಿ ಅವರನ್ನು ಬಹಳ ನಂಬಿದ್ದೇವೆ. ಗುರುವಾರ ವರದಿ ತರಿಸಿಕೊಳ್ಳಲಿದ್ದಾರೆ ಎಂಬ ಸೂಚನೆಗಳು ಬಂದಿವೆ’ ಎಂದೂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.