ಬೆಳಗಾವಿ: ‘ಕೃಷಿ ಕೃತ್ಯವ ಮಾಡುವವರ ಪಾದವ ತೋರಿಸಿ ಬದುಕಿಸಯ್ಯ ಎಂದು ಹೇಳುವ ಮೂಲಕ ಕೃಷಿ ಹಾಗೂ ರೈತರಿಗೆ ಅತ್ಯಂತ ಗೌರವಯುತ ಸ್ಥಾನ ನೀಡಿರುವ ಬಸವಣ್ಣ ವಿಶ್ವದ ಪ್ರಪ್ರಥಮ ರೈತ ನಾಯಕ’ ಎಂದು ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್. ದರ್ಗೆ ಹೇಳಿದರು.
ಬಸವ ಪಂಚಮಿ ಅಂಗವಾಗಿ ಬಸವ ಭೀಮ ಸೇನೆ ವತಿಯಿಂದ ಜುಲೈ 27ರವರೆಗೆ ಹಮ್ಮಿಕೊಂಡಿರುವ ‘ನಮ್ಮ ನಡೆ ನಮ್ಮ ಸಮುದಾಯಗಳ ಕಡೆ’ ಅಭಿಯಾನ ಅಂಗವಾಗಿ ಕಡೋಲಿಯ ರೈತ ನಾಯಕ ಅಪ್ಪಾಸಾಹೇಬ ದೇಸಾಯಿ ಅವರನ್ನು ಗೌರವಿಸಿ ಅವರು ಮಾತನಾಡಿದರು.
‘ಕೃಷಿಕರು ಹಾಗೂ ಕೃಷಿ ಕಾರ್ಮಿಕರನ್ನು ಸಮೀಕರಿಸುವ ಮೂಲಕ ಕಾಯಕ ದಾಸೋಹದ ಲಿಂಗಾಯತ ಎಂಬ ವಿನೂತನ ಧರ್ಮವನ್ನು ಬಸವಣ್ಣ ನೀಡಿದರು. ಲಿಂಗಾಯತವು ರೈತ ಮತ್ತು ಕಾಯಕ ಜೀವಿಗಳ ಧರ್ಮ. ಬಸವಣ್ಣನ ವಿನೂತನ ಸಮೀಕರಣದಿಂದಾಗಿ ಕಲ್ಯಾಣ ರಾಜ್ಯವು ಬೇಡುವ ಬಡವರಿಲ್ಲದ, ಹಸಿವು ಮತ್ತು ಬಡತನ ಮುಕ್ತ ಸಮೃದ್ಧ ರಾಜ್ಯವಾಗಿ ಉದಯಿಸಿತ್ತು. ಬಸವಣ್ಣನ ವಿನೂತನ ಹೋರಾಟದ ಮಾದರಿಯನ್ನು ರೈತ ಹಾಗೂ ಕಾರ್ಮಿಕ ಸಂಘಟನೆಗಳು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಸನ್ಮಾನ ಸ್ವೀಕರಿಸಿದ ಅಪ್ಪಾಸಾಹೇಬ, ‘ಆಳುವ ವರ್ಗಗಳ ತಪ್ಪು ಹಾಗೂ ವಿವೇಚನಾರಹಿತ ನೀತಿಗಳಿಂದಾಗಿ ಇಂದು ಸಣ್ಣ ಹಿಡುವಳಿ ರೈತರು ಸಂಕಷ್ಟಗಳಿಗೆ ಸಿಲುಕಿ ನರಳುವಂತಾಗಿದೆ. ಸರ್ಕಾರ ಘೋಷಿಸುತ್ತಿರುವ ಪರಿಹಾರ ರೈತರಿಗೆ ಸಿಗುತ್ತಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.