ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನಗೊಳಿಸಿದ್ದಕ್ಕೆ ರಾಜ್ಯದಾದ್ಯಂತ ಆಕ್ರೋಶ ಭುಗಿಲೆದ್ದಿರುವ ಸಂದರ್ಭದಲ್ಲೇ, ಜಿಲ್ಲೆಯ ಖಾನಾಪುರ ತಾಲ್ಲೂಕಿನ ಹಲಸಿ ಗ್ರಾಮದಲ್ಲಿ ಜಗಜ್ಯೋತಿ ಬಸವೇಶ್ವರ ಫೋಟೊಗೆ ಸಗಣಿ ಮೆತ್ತಿ ಸೋಮವಾರ ಅವಮಾನಿಸಲಾಗಿದೆ.
ಆ ಗ್ರಾಮದ ಬಸವೇಶ್ವರ ವೃತ್ತಕ್ಕೆ ಹಾಕಿರುವ ಫೋಟೊಗೆ ಸಗಣಿ ಹಾಕಲಾಗಿದೆ. ಅದೇ ವೃತ್ತದಲ್ಲಿ ಅಳವಡಿಸಿದ್ದ ಕನ್ನಡ ನಾಮಫಲಕಕ್ಕೆ ಮಸಿ ಬಳಿದಿದ್ದಾರೆ. ಅಲ್ಲಿನ ಗ್ರಾಮ ಪಂಚಾಯ್ತಿ ಆವರಣದಲ್ಲಿದ್ದ ಕನ್ನಡ ಬಾವುಟವನ್ನೂ ಕಿತ್ತು ಹಾಕಿದ್ದಾರೆ.
ಕಿಡಿಗೇಡಿಗಳ ಕೃತ್ಯವನ್ನು ಕನ್ನಡಪರ ಸಂಘಟನೆಗಳ ಮುಖಂಡರು ಖಂಡಿಸಿದ್ದಾರೆ.
‘ಸಮ ಸಮಾಜ ನಿರ್ಮಾಣದ ಹರಿಕಾರ, ಮಹಾ ಮಾನವತಾವಾದಿ ಬಸವಣ್ಣನವರ ಫೋಟೊಗೆ ಸಗಣಿ ಮೆತ್ತಿ ಅವಮಾನಿಸಿರುವುದು ಖಂಡನೀಯ. ಅವಮಾನಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ ಒತ್ತಾಯಿಸಿದ್ದಾರೆ.