ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಪರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜಿಲ್ಲೆಯ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಗುರುವಾರ ತೆರದ ವಾಹನದಲ್ಲಿ ರೋಡ್ ಶೋ ನಡೆಸಿ ಮತ ಯಾಚಿಸಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ,ಸಚಿವರಾದ ಜಗದೀಶ ಶೆಟ್ಟರ್, ಮುರುಗೇಶ ನಿರಾಣಿ, ಉಮೇಶ ಕತ್ತಿ, ಶ್ರೀಮಂತ ಪಾಟೀಲ, ಶಾಸಕ ಅಭಯ ಪಾಟೀಲ ಇದ್ದರು. ನೂರಾರು ಮಂದಿ ಕಾರ್ಯಕರ್ತರು ದ್ವಿಚಕ್ರವಾಹನದಲ್ಲಿ ಭಾಗವಹಿಸಿದ್ದರು.
ಹುಕ್ಕೇರಿ ಹಿರೇಮಠ ಶಾಖೆಗೆ ಭೇಟಿ ಪ್ರಚಾರಕ್ಕೆ ತೆರಳುವುದಕ್ಕೂಮುನ್ನ ಬಿ.ಎಸ್. ಯಡಿಯೂರಪ್ಪ ಅವರು ಶಿವಬಸವನಗರದ ನಾಗನೂರು ರುದ್ರಾಕ್ಷಿ ಮಠ ಹಾಗೂ ಹುಕ್ಕೇರಿ ಹಿರೇಮಠ ಶಾಖೆಗೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.
ಹುಕ್ಕೇರಿ ಮಠದಲ್ಲಿ ಮಾತನಾಡಿದ ಮುಖ್ಯಮಂತ್ರಿ, 'ಸಮಾಜದ ಉದ್ದಾರಕ್ಕೆ ನಿಮ್ಮನ್ನು ನೀವು ತೊಡಗಿಸಿಕೊಂಡಿದ್ದೀರಿ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಆಗಬೇಕು ಎಂದು ಕೋಟ್ಯಂತರ ಜನರು ಆಸೆ ಪಟ್ಟಿದ್ದರು. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ರಾಮಮಂದಿರ ನಿರ್ಮಾಣ ಆಗುತ್ತಿದೆ ಎಂದರು.
ಕೋವಿಡ್ ನಮ್ಮನ್ನು ಕಾಡುತ್ತಿದೆ.ಕೊರೊನಾ ದೂರವಾಗಿಸಲುನೀವು ಆಶೀರ್ವಾದ ಮಾಡಬೇಕು.ಸದೃಢ ರಾಜ್ಯ ಕಟ್ಟಲು, ಅಭಿವೃದ್ಧಿಗೆ ನಿಮ್ಮ ಆಶೀರ್ವಾದ ಬೇಕು. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಬದ್ಧವಾಗಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.ಕೆಲವು ಕಡೆ ನೈಟ್ ಕರ್ಪ್ಯೂ ಹಾಕಲಾಗಿದೆ. ಮತ್ತೆಸಭೆ ಮಾಡಿ ಬಳಿಕ ಮತ್ತಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು.