ಬೆಳಗಾವಿ: ‘ಕಳೆದ ವರ್ಷ ಮಲಪ್ರಭಾ ನದಿ ಪ್ರವಾಹಕ್ಕೆ ಸಿಲುಕಿ ನೆಲಸಮಗೊಂಡ ರಾಮದುರ್ಗ ತಾಲ್ಲೂಕಿನ ನೂರಾರು ಮನೆಗಳಿಗೆ ತಕ್ಷಣ ಪರಿಹಾರ ಒದಗಿಸದಿದ್ದರೆ ಇದೇ ತಿಂಗಳ 15ರಂದು ಆಮರಣ ಉಪವಾಸ ಹಮ್ಮಿಕೊಳ್ಳಲಾಗುವುದು’ ಎಂದು ಸಂತ್ರಸ್ತರು ಎಚ್ಚರಿಕೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ಹಮ್ಮಿಕೊಂಡ ಅವರು, ‘ಪ್ರವಾಹಕ್ಕೆ ಸಿಲುಕಿ ಮನೆಗಳು ನೆಲಸಮಗೊಂಡು 10 ತಿಂಗಳು ಕಳೆದರೂ ಎಲ್ಲ ಮನೆಗಳಿಗೆ ಪರಿಹಾರ ಸಿಕ್ಕಿಲ್ಲ. ಜಿ.ಪಿ.ಎಸ್. ಮಾಡದಿದ್ದರಿಂದ ಇದುವರೆಗೆ ಪರಿಹಾರ ದೊರೆತಿಲ್ಲ. ತಕ್ಷಣ ಇದರ ಬಗ್ಗೆ ಕ್ರಮಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದರು.
‘ಈಗ ಜೂನ್ ತಿಂಗಳು ಬಂದಿದ್ದು, ಮತ್ತೆ ಮಳೆಗಾಲ ಆರಂಭವಾಗಲಿದೆ. ತಕ್ಷಣ ಪರಿಹಾರದ ಹಣ ಬಿಡುಗಡೆ ಮಾಡದಿದ್ದರೆ ಬಡವರು, ಕೂಲಿ ಕಾರ್ಮಿಕರು ಎಲ್ಲಿಗೆ ಹೋಗಬೇಕು’ ಎಂದು ಪ್ರಶ್ನಿಸಿದರು.