ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ಲೋಕದ ಹೊಸ ಟಿಸಿಲು

Last Updated 14 ಮೇ 2018, 19:30 IST
ಅಕ್ಷರ ಗಾತ್ರ

ಆ ಬಾನಿಗೆ ಬಾನಾಡಿ ಕೂಡಿ.. ಬಾನಗಲ ಹಾರಾಡುವಾ ಸುಳಿಗಾಳಿಗೆ ಪರಿಮಳವು ಕೂಡಿ.. ಜಗವೆಲ್ಲಾ ಘಮವಾಗುವಾ
ಈ ಕೂಡಿ ಹಾಡೋ ಜೋಡಿ ಜಗದ ವಿಸ್ಮಯ ಆ ಕೂಡಿ ಹಾಡೋ ಹೆಸರೇ ಗೆಳೆತನ..

-ಗೆಳೆತನ, ಅದರ ಬಾಂಧವ್ಯ ಮತ್ತು ಮಾಧುರ್ಯವನ್ನು ಉಣಬಡಿಸುವಈ ಸಾಲುಗಳ ಪ್ರತಿ ಪದದಲ್ಲೂ ಲಾಲಿತ್ಯವಿದೆ. ಸಾಹಿತ್ಯಕ್ಕೆ ಸರಿಸಮನಾಗಿ ಸಂಗೀತದ ಓಘವಿದೆ. ಹಾಡಿಗೆ ದನಿಯಾದ ಕಂಠದಲ್ಲಿ ಭಾವ ಪರವಶತೆಯಿದೆ. ಹೌದು, ಕೇಳುಗರನ್ನು ಉಲ್ಲಸಿತಗೊಳಿಸುತ್ತಿರುವ ‘ಗೆಳೆತನ’ ಆಲ್ಬಮ್, ಯೂಟ್ಯೂಬ್‍ನಲ್ಲಿ ಈಗ ಜನಜನಿತ. ಪದಗಳಿಗೆ ಮುತ್ತು ಪೋಣಿಸಿದಂತೆ ರಾಗಗಳ ಜೊತೆ ಲಾಸ್ಯವಾಡಿದ ಯುವ ಗಾಯಕ ರುಮಿತ್ ಕೆ. ಸದ್ಯ ಸಂಗೀತ ಕ್ಷೇತ್ರದ ಹೊಸ ಭರವಸೆ.

ಬೆಳ್ಳಗಿನ ಮೊಗ, ಅದಕ್ಕೊಪ್ಪುವ ಕನ್ನಡಕ, ಗುಂಗುರು ಕೂದಲು, ನಕ್ಕರೆ ಸಕ್ಕರೆ. ರುಮಿತ್ ಇರೋದು ಹೀಗೆ. ಈ ಯುವ ಗಾಯಕನ ಗೆಳತನ ಆಲ್ಬಮ್ ಅನ್ನು ಅಲ್ಪಾವಧಿಯಲ್ಲೇ 1 ಲಕ್ಷದ 25 ಸಾವಿರಕ್ಕೂ ಹೆಚ್ಚು ಜನ ಮೆಚ್ಚಿದ್ದಾರೆ. ಹಿಂದಿ ಭಾಷೆಯಲ್ಲೂ ಇದು ಬಿಡುಗಡೆಯಾಗಿದೆ. ಮತ್ತೊಂದು ಆಲ್ಬಮ್ ತಯಾರಿಗೂ ಇದು ಸ್ಫೂರ್ತಿಯಾಗಿರುವುದು  ಇದೇ ಕಾರಣಕ್ಕೆ. ಚೊಚ್ಚಲ ಪ್ರಯತ್ನದಲ್ಲೇ ಯಶಸ್ಸು ಬೆನ್ನಿಗೆ ಕಟ್ಟಿಕೊಂಡ ರುಮಿತ್ ಅವರ ಎರಡನೇ ಆಲ್ಬಮ್ ‘ಮನಸೇ ನಿನ್ನಾ ದಾರಿಯು ಎಲ್ಲಿಗೆ..’ ಬಿಡುಗಡೆಗೆ ಸಿದ್ಧವಾಗಿದೆ.

ಹುಟ್ಟಿದ್ದು ಬೆಂಗಳೂರಿನಲ್ಲಿ. ಅಲ್ ಖತೀಬ್ ಕಾಲೇಜಿನಲ್ಲಿ ಈಗ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆಯುತ್ತಿರುವ ಇವರಿಗೆ ರುಮಿತ್ ಎಂಬ ಹೆಸರು ಇಟ್ಟಿದ್ದೂ ಕೊಂಚ ವಿಶೇಷ. ಈ ಹಿಂದೆ ಪ್ರಸಾರವಾಗುತ್ತಿದ್ದ ‘ಬೂಗಿ ವೂಗಿ’ ಟಿ.ವಿ ನೃತ್ಯ ಕಾರ್ಯಕ್ರಮದಲ್ಲಿದ್ದ ರುಮಿತ್ ಎಂಬ ಪಂಜಾಬಿ ಹುಡುಗನ ಹೆಸರನ್ನೇ ಇವರ ಚಿಕ್ಕಮ್ಮ ಆಯ್ಕೆ ಮಾಡಿದರು. ಹೆಸರು ಪಂಜಾಬಿ ತರ ಇದ್ದರೂ ಇವರು ಪಕ್ಕಾ ಕನ್ನಡಿಗ.

ತಂದೆ ರವಿ ಕಮಲಾಪುರ್‌ಕರ್ ಗುಲ್ಬರ್ಗಾದವರು. ಈಗ ಬೆಂಗಳೂರಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ರುಮಿತ್ ಸಂಗೀತ ಪಯಣ ಶುರುವಾಗಿದ್ದು ಆರನೇ ವಯಸ್ಸಿನಲ್ಲಿ. ಹಾಡಬೇಕು ಎಂಬ ಅದಮ್ಯ ಹಂಬಲಕ್ಕೆ ನೀರೆರೆದು ಪೋಷಿಸಿದವರು ತಾಯಿ ಸ್ವರ್ಣ ಹಾಗೂ ತಂದೆ ರವಿ ಕಮಲಾಪುರ್‌ಕರ್. ಸಿನಿಮಾ ಗೀತೆ ಹಾಡಿದ್ದಕ್ಕೆ ಎಂಟನೇ ತರಗತಿಯಲ್ಲಿ ಬಹುಮಾನ ಪಡೆದರು. ಆರ್ಕೆಸ್ಟ್ರಾಗಳಲ್ಲಿ ಹಾಡಿದಾಗ ಜನ ತಲೆದೂಗಿದರು. ಗಾಯನದಲ್ಲೇ ಮುಂದುವರಿಯಬೇಕು ಎಂಬ ಆಸ್ಥೆಗೆ ಪ್ರೋತ್ಸಾಹ ದೊರೆಯುತ್ತಾ ಹೋಯಿತು.

ಇನ್ನಷ್ಟು ಕಲಿಯುವ ಹಂಬಲಕ್ಕೆ ಸಮರ್ಥ ಗುರುವೊಬ್ಬರು ಬೇಕಿದ್ದರು. ಹಿಂದೂಸ್ತಾನಿ ಗಾಯಕ ಪಂಡಿತ್ ಶರಣ್ ಚೌಧರಿ ಅವರ ಕುರಿತು ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನವು ರುಮಿತ್ ಅವರಿಗೆ ಶಿಷ್ಯಮಾನ್ಯ ಗುರುವೊಬ್ಬರನ್ನು ಹುಡುಕಿಕೊಟ್ಟಿತು. ಶರಣ್ ಅವರ ಬಳಿ ರುಮಿತ್ ರಾಗಾಲಾಪಕ್ಕೆ ಮತ್ತಷ್ಟು ಹೊಳಪು ಸಿಕ್ಕಿತು. ರುಮಿತ್‍ಗೆ ಸಂಗೀತದ ಬಗೆಗಿದ್ದ ಆಸಕ್ತಿ, ಸ್ವರಜ್ಞಾನ ಗುರುಗಳಿಗೂ ಹಿಡಿಸಿತು. ಇವರೀಗ ಹಿನ್ನೆಲೆ ಗಾಯನ, ಹಿಂದೂಸ್ತಾನಿ ಸಂಗೀತ ಹಾಗೂ ಕೀಬೋರ್ಡ್ ಅಭ್ಯಸಿಸುತ್ತಿದ್ದಾರೆ.

ಗೆದ್ದಿತು ‘ಗೆಳೆತನ’

ರುಮಿತ್‍ಗೆ ಬಾಲಿವುಡ್‍ನ ಮೆಲೊಡಿ ಹಾಡುಗಳೆಂದರೆ ಅಚ್ಚುಮೆಚ್ಚು. ಇಷ್ಟದ ಹಾಡುಗಳನ್ನು ಗುನುಗುತ್ತಿರುವುದು ಅವರ ಸ್ವಭಾವ. ಸ್ವರಗಳ ಮೇಲೆ ಒಂದಿಷ್ಟು ಹಿಡಿತ ಸಿಕ್ಕಿತು. ಹೊಸದನ್ನೇನಾದರೂ ಮಾಡುವ ಆಲೋಚನೆಯ ಫಲವಾಗಿ ಹೊಳೆದದ್ದೇ ಮ್ಯೂಸಿಕ್ ಆಲ್ಬಮ್. ಶ್ರೀಹರಿ ಧೂಪದ್ ಅವರ ಸಾಹಿತ್ಯಕ್ಕೆ ಶರಣ್ ಚೌಧರಿ ಸಂಗೀತ ಒದಗಿಸಿದರು.

ವಿಜಯ್ ವಿ. ಅವರು ಹಿಂದಿ ಅವತರಣಿಕೆಗೆ ಸಾಹಿತ್ಯ ಬರೆದಿದ್ದಾರೆ. ಮಂಗಳೂರು, ಮಡಿಕೇರಿ, ದೇವನಹಳ್ಳಿಯಲ್ಲಿ ಶೂಟಿಂಗ್ ನಡೆಯಿತು. ಗಾಯಕನೊಳಗಿದ್ದ ಕಲಾವಿದ ಆವಿರ್ಭವಿಸಿದ್ದು ಹೀಗೆ. ನಂತರದ್ದೆಲ್ಲ ಯಶಸ್ಸಿನ ಪಯಣ. ಎರಡನೇ ಪ್ರಯತ್ನ ‘ಮನಸೇ ನಿನ್ನಾ ದಾರಿಯು ಎಲ್ಲಿಗೆ..’ ಅಲ್ಬಮ್ ಕೂಡಾ ಸೆಟ್ಟೇರಿತು.

ಕನ್ನಡ ಖ್ಯಾತ ಹಿನ್ನೆಲೆ ಗಾಯಕಿ ಅನುರಾಧಾ ಭಟ್ ಜೊತೆ ಮೀಸೆಚಿಗುರಿದ ಹುಡುಗ ಮೋಹಕವಾಗಿ ಹಾಡಿ ಸೈ ಎನಿಸಿಕೊಂಡಿದ್ದಾರೆ. ಜಿಂದಾಲ್ ಸಿಟಿಯಲ್ಲಿ ಶೂಟಿಂಗ್ ನಡೆಯಿತು. ಈ ರೊಮ್ಯಾಂಟಿಕ್ ಗೀತೆಗೆ ಧನುಶ್ರೀ ಅವರು ರುಮಿತ್ ಜೊತೆ ಹೆಜ್ಜೆ ಹಾಕಿದ್ದಾರೆ.

ರುಮಿತ್ ಹಾಡುಗಾರಿಕೆಯನ್ನು ಮೆಚ್ಚಿದ ನಟ, ನಿರ್ಮಾಪಕ ಪ್ರದೀಪ್ ಅವರು ತಮ್ಮ ಚಿತ್ರದಲ್ಲಿ ಹಾಡುವಂತೆ ಆಹ್ವಾನ ನೀಡಿದ್ದಾರೆ. ಚಿತ್ರರಂಗದಲ್ಲೇ ನೆಲೆಯೂರುವ ಅದಮ್ಯ ಬಯಕೆ ಹೊಂದಿರುವ ರುಮಿತ್‍ಗೆ ಸಂಗೀತ ನಿರ್ದೇಶನದಲ್ಲೂ ತೊಡಗಿಸಿಕೊಳ್ಳುವ ಉಮೇದು ಇದೆ. ಮುಂದೊಂದು ದಿನ ನಾಯಕನಟನಾಗಿ ಬೆಳ್ಳಿ ತೆರೆಯಲ್ಲೂ ಕಾಣಿಸಿಕೊಳ್ಳುವ ಆಸೆ ಇದೆ.

ಗೆಳೆತನದ ಕೊಂಡಿಗೆ https://youtu.be/dfEfLVpIHRk ಕ್ಲಿಕ್ಕಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT