ಬೆಳಗಾವಿ: ರಾರಾಜಿಸಿದ ಕನ್ನಡ ಬಾವುಟಗಳು. ಮೊಳಗಿದ ಕನ್ನಡ ಪರ ಘೋಷಣೆ. ರಂಗು ತುಂಬಿದ ಕಲಾತಂಡಗಳು. ಮಕ್ಕಳು ಹಿಡಿದು ತಂದ ನೂರು ಅಡಿ ಉದ್ದದ ಕನ್ನಡ ಬಾವುಟ. ಪಲ್ಲಕ್ಕಿಯಲ್ಲಿ ಗ್ರಂಥಗಳ ಮೆರವಣಿಗೆ.
ಇವು ಗಡಿ, ಕಾಗವಾಡದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶನಿವಾರ ನಡೆದ ಮೆರವಣಿಗೆ ನೋಟಗಳಿವು.
ನಾಡದೇವಿ ಭುವನೇಶ್ವರಿ ಫೋಟೊ ಅನ್ನು ಆನೆ ಮೇಲೆ ಮೆರವಣಿಗೆಯಲ್ಲಿ ತರಲಾಯಿತು. ಸಮ್ಮೇಳನಾಧ್ಯಕ್ಷ ಪ್ರಭಾಕರ ಕೋರೆ- ಆಶಾ ಕೋರೆ ದಂಪತಿಯನ್ನು ಸಾರೋಟಿನಲ್ಲಿ ಸಂಭ್ರಮದಿಂದ ಬರ ಮಾಡಿಕೊಳ್ಳಲಾಯಿತು. ಮಹಿಳೆಯರು ಪೂರ್ಣಕುಂಭ ಹೊತ್ತು ಪಾಲ್ಗೊಂಡಿದ್ದರು.
ಗ್ರಾಮ ಪಂಚಾಯ್ತಿ ಬಳಿಯಿಂದ ರಾಣಿ ಚನ್ನಮ್ಮ ವೃತ್ತದ ಮೂಲಕ ಮಲ್ಲಿಕಾರ್ಜುನ ವಿದ್ಯಾಲಯದ ಆವರಣದವರೆಗೆ ಮೆರವಣಿಗೆ ನಡೆಯಿತು.
ಸಮ್ಮೇಳನಾಧ್ಯಕ್ಷ ಕೋರೆ ದಂಪತಿ ಇದ್ದ ಸಾರೋಟಿನ ಕುದುರೆಯೊಂದು ಎಡವಿ ಬಿದ್ದಿದ್ದರಿಂದ ಕೆಲಕಾಲ ಆತಂಕ ಉಂಟಾಗಿತ್ತು. ಕೆಲವು ನಿಮಿಷಗಳಲ್ಲಿ ಅದು ಚೇತರಿಸಿಕೊಂಡು ಮೇಲೆದ್ದಿತು. ನಂತರ ಸಾರೋಟು ಹೊರಟಿತು.
ಇದಕ್ಕೂ ಮುನ್ನ ರಾಷ್ಟ್ರಧ್ವಜ, ನಾಡಧ್ವಜ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ನೆರವೇರಿಸಲಾಯಿತು.
ಕಾಗವಾಡ ಪ್ರತ್ಯೇಕ ತಾಲ್ಲೂಕು ರಚನೆಯಾದ ನಂತರ ನಡೆಯುತ್ತಿರುವ ಮೊದಲ ಜಿಲ್ಲಾ ಸಮ್ಮೇಳನ ಇದಾಗಿದೆ.