ಬೆಳಗಾವಿ: ದಕ್ಷಿಣ ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ತಾಲ್ಲೂಕಿನಲ್ಲಿ ಕೃಷ್ಣಾ ಮತ್ತು ಉಪನದಿಗಳ ನೀರಿನ ಒಳಹರಿವಿನಲ್ಲಿ ಹೆಚ್ಚಳ ಉಂಟಾಗಿದೆ. ಚಿಕ್ಕೋಡಿ ತಾಲ್ಲೂಕಿನ ಒಂದು, ನಿಪ್ಪಾಣಿ ತಾಲ್ಲೂಕಿನ 3 ಬ್ಯಾರೇಜ್ಗಳು ಮುಳುಗಡೆಯಾಗಿವೆ.
ಕೃಷ್ಣಾ ನದಿಗೆ 15 ಸಾವಿರ ಕ್ಯುಸೆಕ್ ಮತ್ತು ದೂಧಗಂಗಾ ಮತ್ತು ವೇದಗಂಗಾ ನದಿಗೆ ಒಟ್ಟು 11 ಸಾವಿರ ಕ್ಯುಸೆಕ್ ಸೇರಿದಂತೆ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ 26 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದೆ.
ಪರಿಣಾಮವಾಗಿ ದೂಧಗಂಗಾ ನದಿಗೆ ಅಡ್ಡಲಾಗಿರುವ ಚಿಕ್ಕೋಡಿ ತಾಲ್ಲೂಕಿನ ಮಲಿಕವಾಡ- ದತ್ತವಾಡ ಮತ್ತು ನಿಪ್ಪಾಣಿ ತಾಲ್ಲೂಕಿನ ಕಾರದಗಾ- ಭೋಜ ಗ್ರಾಮಗಳ ಮಧ್ಯೆದ ಬ್ಯಾರೇಜ್ ಮುಳುಗಡೆಯಾಗಿದೆ.
ವೇದಗಂಗಾ ನದಿಗೆ ಅಡ್ಡಲಾಗಿರುವ ಬೋಜವಾಡಿ-ಕುನ್ನೂರ, ಅಕ್ಕೋಳ- ಸಿದ್ನಾಳ ಬ್ಯಾರೇಜ್ ಸಹ ಮುಳುಗಡೆಯಾಗಿವೆ.
ಈ ಗ್ರಾಮಗಳಿಗೆ ಪರ್ಯಾಯ ರಸ್ತೆಗಳಿದ್ದು, ಜನರು ಈ ಮಾರ್ಗಗಳನ್ನು ಬಳಸುತ್ತಿದ್ದಾರೆ.
ಬೆಳಗಾವಿಯಲ್ಲೂ ಮಳೆ: ಬೆಳಗಾವಿ, ಖಾನಾಪುರ, ನಿಪ್ಪಾಣಿ, ಹಾರೂಗೇರಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಳೆ ಸುರಿದಿದೆ.