ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಛತ್ರಪತಿ ಶಿವಾಜಿ ಮಹಾರಾಜರಿಗೆ ಅಪಮಾನ ಮಾಡಿದವರಿಗೆ ಕಠಿಣ ಶಿಕ್ಷೆ ನೀಡಬೇಕು. ಗಲಾಟೆ- ಗದ್ದಲಗಳಿಂದ ಹೊರಬಂದು ಎಲ್ಲರೂ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಒತ್ತಾಯಿಸಿ ಸಾಮಾಜಿಕ ಸಾಮರಸ್ಯ ವೇದಿಕೆ ಮುಖಂಡರು ಜಿಲ್ಲಾಧಿಕಾರಿ ಕಚೇರಿಗೆ ಶನಿವಾರ ಮನವಿ ಸಲ್ಲಿಸಿದರು.
ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಬೆಳಗಾವಿಯಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಈ ವೇಳೆ ಕಾನೂನು ಕೈಗೆತ್ತಿಕೊಂಡು ಯಾರೂ ಶಾಂತಿ ಕದಡಬಾರದು. ಎಲ್ಲ ನಾಯಕರನ್ನೂ ಗೌರವಿಸಿ ಸಮಾಜದಲ್ಲಿ ಸಾಮರಸ್ಯದಿಂದ ಬಾಳಬೇಕು ಎಂದು ಕೋರಿದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಚಿತ್ ಪ್ರಕಾಶಾನಂದ ಸ್ವಾಮೀಜಿ, ಮುಖಂಡರಾದ ಕೃಷ್ಣಭಟ್, ರಾಜೇಂದ್ರ ಜೈನ, ಲಕ್ಷ್ಮಣ ಪವಾರ, ಶ್ರೀಕಾಂತ ಕಾಂಬಳೆ, ಸಂತೋಷ ನಾಗರಮುನ್ನೋಳಿ ಮೊದಲಾದವರು ಇದ್ದರು.