ಬೆಳಗಾವಿ: ಸಹ ಪ್ರಾಧ್ಯಾಪಕ ಡಾ.ಡಿ.ಎನ್. ಮಿಸಾಳೆ ಮತ್ತು ಉಪನ್ಯಾಸಕ ಪ್ರೊ.ಎ.ಪಿ. ಮನೇಜ ರಚಿಸಿರುವಇನ್ನೋವೇಟಿವ್ ಪ್ರಕಾಶನ ಹೊರತಂದಿರುವ ‘ಭೌತವಿಜ್ಞಾನ–ಬಿ.ಎಸ್ಸಿ. ಮೊದಲನೇ ಸೆಮಿಸ್ಟರ್ ಪಠ್ಯ’ ಕೃತಿಯನ್ನು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಇಲ್ಲಿನ ಖಾಸಗಿ ಹೋಟೆಲ್ನಲ್ಲಿ ಶುಕ್ರವಾರ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಅವರು, ‘ದಿನಗಳನ್ನು ಕಳೆಯುವುದು ಬದುಕಲ್ಲ. ದಿನಗಳು ವ್ಯಕ್ತಿಯನ್ನು ಶಕ್ತಿಯಾಗಿಸಬಲ್ಲ ಕ್ಷಣಗಳಾದರೆ ಜನ್ಮ ಸಾರ್ಥಕವಾಗುತ್ತದೆ. ಇದಕ್ಕೆ ನಿರಂತರ ಶ್ರಮ ಅಗತ್ಯ’ ಎಂದು ಹೇಳಿದರು.
‘ಮಿಸಾಳೆ ಸಾಧನೆ ಶ್ಲಾಘನೀಯವಾದುದು. ಪುಸ್ತಕ ರಚಿಸುವುದು ಸುಲಭದ ಮಾತಲ್ಲ. ಅದು ಶ್ರಮಿಕರ ಸ್ವತ್ತು ಮಾತ್ರ. ಭೌತವಿಜ್ಞಾನ ವೆಂಬುದು ಬದುಕಿನ ಭಾಗ’ ಎಂದರು.
‘ನಮ್ಮವಿದ್ಯಾರ್ಥಿಗಳು ಭಯ ಬಿಟ್ಟು ಆಸಕ್ತಿ ವಹಿಸಿ ಓದಿಕೊಳ್ಳುವಂತಹ ಪುಸ್ತಕ ರಚಿಸಬೇಕೆಂಬ ಇಚ್ಛೆ ಮೊದಲಿನಿಂದಲೂ ಇತ್ತು. ಈಗ ಅದು ಸಾಧ್ಯವಾಗಿದೆ. ವಿದ್ಯಾರ್ಥಿಗಳ ಮನಸ್ಸನ್ನು ಆಕರ್ಷಿಸಬಲ್ಲ ಪುಸ್ತಕ ಇದಾಗಲಿದೆ ಎಂಬ ನಂಬಿಕೆ ಇದೆ’ ಎಂದು ಮಿಸಾಳೆ ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಭೌತವಿಜ್ಞಾನ ವಿಭಾಗದ ಅಧ್ಯಕ್ಷ ಡಾ.ಬಿ.ಜಿ. ಹೆಗಡೆ ಮಾತನಾಡಿದರು. ಪ್ರೊ.ಬಿ.ಎಂ. ತೋಪಿನಕಟ್ಟಿ ಪುಸ್ತಕ ಪರಿಚಯಿಸಿದರು.
ಜಗದೀಶ ಮಠದ, ಸುನೀಲ ಜಿರಾಳೆ, ಮಲ್ಲೇಶ ರೊಟ್ಟಿ, ಪ್ರೊ.ಶಿವಾನಂದ ಮೂಲಿಮನಿ, ಸುಭಾಷ ಓವುಳಕರ, ಡಾ.ಎ.ಬಿ. ಪವಾರ, ಪುಸ್ತಕ ಪ್ರಕಾಶನದ ಮುಖ್ಯಸ್ಥ ಅಶೋಕ ದೊಂಡ ಇದ್ದರು.