ಬೆಳಗಾವಿ: ಶನಿವಾರ ಸಂಜೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದ ಇಲ್ಲಿನ ಚವಾಟ ಗಲ್ಲಿಯ ನಿವಾಸಿ, ಬಿಜೆಪಿ ನಗರ ಘಟಕದ ಸದಸ್ಯೆ ಪುಷ್ಪಾ ಕಿಲ್ಲೇಕರ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಒಂದು ವರ್ಷದ ಹಿಂದೆ ಪುಷ್ಪಾ ಅವರು ಬಿಜೆಪಿ ಸೇರಿಕೊಂಡಿದ್ದರು. ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
‘ನಾನು ಸಕ್ರಿಯವಾಗಿರುವುದನ್ನು ಸಹಿಸದ ಪಕ್ಷದ ಮತ್ತೊಬ್ಬ ಮಹಿಳಾ ಸದಸ್ಯೆ ಹಾಗೂ ಅವರ ಪತಿ ನನಗೆ ನಿರಂತರ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸರವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಪತ್ರ ಬರೆದಿಟ್ಟು, ವಿಷ ಸೇವಿಸಿದ್ದರು. ಈ ಪತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದುವರೆಗೆ ಯಾರೂ ದೂರು ಕೊಟ್ಟಿಲ್ಲವಾಗಿದ್ದರಿಂದ ಪ್ರಕರಣ ದಾಖಲಿಸಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.