ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ರಮೇಶ ಕತ್ತಿ ಅವರಿಗೆ ಸಿಗದಿದ್ದರೆ ನೇಣು ಹಾಕಿಕೊಳ್ಳುವುದಾಗಿ ಯುವಕನೊಬ್ಬ ದೂರವಾಣಿ ಸಂಭಾಷಣೆಯಲ್ಲಿ ಹೇಳಿರುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಮೇಶ ಕತ್ತಿ ಅವರಿಗೆ ದೂರವಾಣಿ ಕರೆ ಮಾಡಿದ ಸಂಕೇಶ್ವರದ 29 ವರ್ಷ ವಯಸ್ಸಿನ ಶಶಿಕಾಂತ ಎನ್ನುವವರು, ‘ನಿಮಗೆ ಟಿಕೆಟ್ ಸಿಗದಿದ್ದರೆ ನೇಣು ಹಾಕಿಕೊಳ್ಳುತ್ತೇನೆ. ಚಿಕ್ಕೋಡಿ ಕ್ಷೇತ್ರಕ್ಕೆ ಅಣ್ಣಾಸಾಹೇಬ್ ಜೊಲ್ಲೆ ಅವರಿಗೆ ಟಿಕೆಟ್ ಸಿಗಬಾರದು. ಅವರು ಸರಿಯಿಲ್ಲ. ನಿಮಗೇ ಟಿಕೆಟ್ ಸಿಗಲಿ’ ಎಂದು ಹೇಳಿದರು.
ಇದಕ್ಕೆ ಆತಂಕ ವ್ಯಕ್ತಪಡಿಸಿದ ರಮೇಶ ಅವರು, ‘ದಯವಿಟ್ಟು ನೇಣುಹಾಕಿಕೊಳ್ಳಬೇಡ. ಅಂತಹ ತಪ್ಪು ಮಾಡಬೇಡ. ನೂರಕ್ಕೆ ನೂರರಷ್ಟು ಟಿಕೆಟ್ ನನಗೇ ಸಿಗಲಿದೆ ಎನ್ನುವ ವಿಶ್ವಾಸವಿದೆ. ನಿನ್ನ ತಂದೆ, ತಾಯಿ ಅವರನ್ನು ನೆನಪಿಸಿಕೋ. ಶಾಂತವಾಗಿರು’ ಎಂದು ಬುದ್ಧಿಮಾತು ಹೇಳಿದ್ದಾರೆ.
‘ದೇವರಿಗೆ ಹೂ ಏರಿಸಿ, ನನಗೆ ಟಿಕೆಟ್ ಸಿಗಲೆಂದು ಬೇಡಿಕೋ ಅಷ್ಟೇ ಸಾಕು. ನೇಣುಹಾಕಿಕೊಳ್ಳುವಂತಹ ದುಡುಕಿನ ನಿರ್ಧಾರ ಕೈಗೊಳ್ಳಬೇಡ’ ಎಂದು ತಿಳಿಹೇಳಿರುವುದು ಆಡಿಯೊ ತುಣಕಿನಲ್ಲಿದೆ.