ಬೆಳಗಾವಿ: ಜಿಎಸ್ಟಿ ಕಟ್ಟಿಲ್ಲ, ₹ 25 ಸಾವಿರ ಲಂಚ ನೀಡುವಂತೆ ಖಾಸಗಿ ಕಂಪನಿಯ ಮಾಲೀಕನಿಗೆ ಬ್ಲಾಕ್ಮೇಲ್ ಮಾಡಿದ್ದ ಆರೋಪದ ಮೇಲೆ ಕೇಂದ್ರ ಅಬಕಾರಿ ಇಲಾಖೆಯ ಜಿಎಸ್ಟಿ ಗುಮಾಸ್ತ ಹಾಗೂ ಆತನ ಸ್ನೇಹಿತನನ್ನು ಬಂಧಿಸಿರುವ ಪೊಲೀಸರು, ಪರಾರಿಯಾಗಿರುವ ಪತ್ರಕರ್ತನ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಅಬಕಾರಿ ಇಲಾಖೆಯ ಗುಮಾಸ್ತ ಅಶೋಕ ಪರಶುರಾಮ ಸಾವಂತ ಹಾಗೂ ಅವರ ಸ್ನೇಹಿತ ಜಯವಂತೆ ಬಾಡಿವಾಲೆ ಅವರು ಕಳೆದ ತಿಂಗಳು ಸೆಪ್ಟೆಂಬರ್ 30ರಂದು ನಗರದ ಗೋವಾವೇಸ್ನಲ್ಲಿರುವ ಡ್ರೀಮ್ ಫ್ಲೈಎವಿಯೇಷನ್ ಅಂಡ್ ಹಾಸ್ಪಿಟಾಲಿಟಿ ಅಕಾಡೆಮಿಗೆ ಭೇಟಿ ನೀಡಿದ್ದರು. ಮಾಲೀಕ ತಿರುಮಲ ವಿಂಜಮುರ ಸುದರ್ಶನ ಅವರನ್ನು ಭೇಟಿಯಾಗಿ ತಮ್ಮನ್ನು ತಾವು ಜಿಎಸ್ಟಿ ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದರು.
ಜಿಎಸ್ಟಿ ಹಣ ಕಟ್ಟಿಲ್ಲ. ನಿಮ್ಮ ಕಚೇರಿಗೆ ಬೀಗ ಹಾಕ ಬೇಕಾಗುತ್ತದೆ ಎಂದು ಆರೋಪಿಗಳು ಹೆದರಿಸಿ, ₹ 3,000 ಪಡೆದುಕೊಂಡು ಹೋಗಿದ್ದರು ಎಂದು ತಿರುಮಲ ಅವರು ದೂರಿನಲ್ಲಿ ತಿಳಿಸಿದ್ದಾರೆ.
ನಂತರ ಅಕ್ಟೋಬರ್ 1ರಂದು ರಾತ್ರಿ ಪತ್ರಕರ್ತ ಮಹೇಶ ತುಕಾರಾಮ ಪಾಟೀಲ ಅವರ ಜೊತೆಗೂಡಿ ಈ ಆರೋಪಿಗಳು ಪುನಃ ಕಚೇರಿಗೆ ಬಂದು, ₹ 25 ಸಾವಿಕ್ಕೆ ಬೇಡಿಕೆ ಇಟ್ಟಿದ್ದರು. ತಿರುಮಲ ಅವರ ಜೊತೆ ಆರೋಪಿಗಳು ವ್ಯವಹಾರ ಕುದುರಿಸಲು ಮಾತುಕತೆ ನಡೆಯುತ್ತಿದ್ದ ವೇಳೆಯೇ ಕಚೇರಿಗೆ ಬಂದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದರು. ಮಹೇಶ ಪಾಟೀಲ ಪರಾರಿಯಾದರು. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.