ಬೆಳಗಾವಿ: ತಾಲ್ಲೂಕಿನ ಕಾಕತಿ ಸಮೀಪದಲ್ಲಿ ಮಾರ್ಕಂಡೇಯ ನದಿ ಪ್ರವಾಹದಲ್ಲಿ ಶುಕ್ರವಾರ ಸಂಜೆ ಕೊಚ್ಚಿ ಹೋಗಿದ್ದ ವ್ಯಕ್ತಿ ಭಾನುವಾರ ಶವವಾಗಿ ಪತ್ತೆಯಾಗಿದ್ದಾರೆ.
ಸಿದ್ರಾಯಿ ದೊಡ್ಡರಾಮ ಸುತಗಟ್ಟಿ (65) ಮೃತರು. ಅವರು ನೀರು ಪಾಲಾಗಿದ್ದ ಸ್ಥಳದಿಂದ ಮೂರು ಕಿ.ಮೀ. ದೂರದ ದರ್ಗಾ ಸೇತುವೆ ಬಳಿ ಮೃತದೇಹ ಪತ್ತೆಯಾಗಿದೆ. ಎಸ್ಡಿಆರ್ಎಫ್, ಅಗ್ನಿಶಾಮಕ ದಳ, ವಾಲ್ಮೀಕಿ ಯುವ ಸಂಘದವರು ಕಾರ್ಯಾಚರಣೆ ನಡೆಸಿದ್ದಾರೆ.
ಜಮೀನಿಗೆ ತೆರಳಿದ್ದ ಸಿದ್ರಾಯಿ ಅಲ್ಲಿನ ಕೆಲಸ ಮುಗಿಸಿ ವಾಪಸಾಗುವಾಗ ಕಾಕತಿ ಬಳಿಯ ಸೇತುವೆ ಸಮೀಪ ಕೈ–ಕಾಲು ತೊಳೆಯಲು ನದಿಗಿಳಿದಿದ್ದರು. ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದರು.
ಪೊಲೀಸರು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ, ವಾರಸುದಾರರಿಗೆ ಮೃತದೇಹ ಹಸ್ತಾಂತರಿಸಿದರು. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು.