ಗೋಕಾಕ: ‘ಸಮಾಜದ ಹಿತಚಿಂತನೆಯೊಂದಿಗೆ ವೈಚಾರಿಕ ಚಿಂತನೆ ಬೆರೆತ ಭಾವವನ್ನು ಈಶ್ವರ ಮಮದಾಪೂರ ಅವರ ‘ಗೋರಿಯೊಳಗಿನ ಉಸಿರು’ ಕೃತಿಯಲ್ಲಿ ಕಾಣಬಹುದು’ ಎಂದು ರಾಯಚೂರು ಜಿಲ್ಲೆಯ ಸಿಂಧನೂರಿನ ಯುವ ಗಜಲ್ ಕವಿ ಸಾವನ್ ಕೆ. ಅಭಿಪ್ರಾಯಪಟ್ಟರು.
ರಾಜ್ಯ ಸಿರಿಗನ್ನಡ ವೇದಿಕೆ ಹಾಗೂ ಸಿರಿಗನ್ನಡ ಮಹಿಳಾ ಜಿಲ್ಲಾ ವೇದಿಕೆ ವತಿಯಿಂದ ಭಾನುವಾರ ಆಯೋಜಿಸಿದ್ದ ‘ಗೋರಿಯೊಳಗಿನ ಉಸಿರು’ ಕೃತಿ ಪರಿಚಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಆತ್ಮಧ್ಯಾನದ ಅನುಸಂಧಾನ ಅನುಭವಿಸಿಯೇ ಬರೆದಂತೆ ಈ ಗಜಲ್ಗಳು ಓದುಗರ ಮನದಾಳಕ್ಕಿಳಿದು ಮಾತನಾಡಿಸುತ್ತವೆ’ ಎಂದರು.
ಚಿಕ್ಕೋಡಿ ಡಿಡಿಪಿಐ ಕಚೇರಿಯ ಕನ್ನಡ ವಿಷಯ ಪರಿವೀಕ್ಷಕ ಅರಿಹಂತ ಬಿರಾದರ ಪಾಟೀಲ, ‘ಪ್ರೇಮ, ವಿರಹ, ದಯೆ, ಸಮಾಜಮುಖಿ ಹಾಗೂ ವೈಚಾರಿಕ ಚಿಂತನೆಗಳ ಹರಿವನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ’ ಎಂದರು.
ಉದ್ಘಾಟಿಸಿದ ರಂಗ ಮತ್ತು ಚಲನಚಿತ್ರ ಕಲಾವಿದೆ ಮಾಲತಿಶ್ರೀ ಮೈಸೂರು, ಅಧ್ಯಕ್ಷತೆ ವಹಿಸಿದ್ದ ಸಿರಿಗನ್ನಡ ವೇದಿಕೆ ಮಹಿಳಾ ವಿಭಾಗದ ಅಧ್ಯಕ್ಷೆ ರಜನಿ ಜೀರಗ್ಯಾಳ, ಕವಿ ಈಶ್ವರ ಮಮದಾಪೂರ ಮಾತನಾಡಿದರು.
ಕಸಾಪ ತಾಲ್ಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಮಹಾಂತೇಶ ತಾಂವಶಿ, ಹುಬ್ಬಳ್ಳಿಯ ಸಿದ್ಧಾರೂಢ ಟ್ರಸ್ಟ್ ಸಮಿತಿ ಧರ್ಮದರ್ಶಿ ಶ್ಯಾಮಾನಂದ ಪೂಜೇರಿ ಅವರನ್ನು ಗೌರವಿಸಲಾಯಿತು. ನಿವೃತ್ತಿ ಹೊಂದಿದ ಡಾ.ಅಶೋಕ ಜೀರಗ್ಯಾಳ ಮತ್ತು ರಜನಿ ಜೀರಗ್ಯಾಳ ಅವರನ್ನು ಸತ್ಕರಿಸಲಾಯಿತು.
ಸಿರಿಗನ್ನಡ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷೆ ಜಯಾ ಚುನಮರಿ ಇದ್ದರು.