ಬೆಳಗಾವಿ: ‘ಜಾತಿ, ಧರ್ಮಗಳಲ್ಲಿ ವೈಷಮ್ಯ ಬಿತ್ತಿ ರಾಜಕೀಯ ಮಾಡುವ ಬಿಜೆಪಿ ನಾಯಕರು, ಈಗ ಕರ್ನಾಟಕ– ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ’ ಎಂದು ಕಾಂಗ್ರೆಸ್ ಒಬಿಸಿ ರಾಜ್ಯ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಆರೋಪಿಸಿದರು.
ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಕೇಂದ್ರದಲ್ಲಿ ಹಾಗೂ ಎರಡೂ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳೇ ಇವೆ. ಆದರೂ ವಿವಾದ ಬಗೆಹರಿಸಿಕೊಳ್ಳಲು ಆಗುತ್ತಿಲ್ಲ. ಈ ಬಾರಿಯ ಚುನಾವಣೆಗೆ ಬಿಜೆಪಿಗೆ ಗಡಿ ತಂಟೆಯ ವಿಷಯವೇ ವೇದಿಕೆ ಆಗಿದೆ’ ಎಂದರು.
‘ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ಮಾತನಾಡಲು ಗೃಹಮಂತ್ರಿ ಅಮಿತ್ ಶಾ ಮುಂದಾಗಿದ್ದಾರೆ. ಆದರೆ, ಗಡಿಯಲ್ಲಿ ವಿವಾದ ಎಬ್ಬಿಸಿ ಎಂದು ಹೇಳುವವರೇ ಇವರು. ಮಗುವನ್ನೂ ತಾವೇ ಚಿವುಟಿ, ತೊಟ್ಟಿಲನ್ನೂ ತಾವೇ ತೂಗಲು ಯತ್ನಿಸುತ್ತಿದ್ದಾರೆ’ ಎಂದು ಟೀಕಿಸಿದರು.
‘ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ನ ಪ್ರಣಾಳಿಕೆಯಲ್ಲಿ ಬೆಳಗಾವಿಯ ಗಡಿ ವಿಚಾರವನ್ನು ಕಡ್ಡಾಯವಾಗಿ ಸೇರಿಸುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.