ನಿಲ್ದಾಣದಲ್ಲಿದ್ದ ಬಸ್ಗಳನ್ನು ಶನಿವಾರ ತಡರಾತ್ರಿ ಡಿಪೊಗೆ ತೆಗೆದುಕೊಂಡು ಹೋಗಿ ನಿಲ್ಲಿಸಿದ ಚಾಲಕರು, ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಇದರಿಂದಾಗಿ ಭಾನುವಾರ ಸಂಜೆವರೆಗೂ ನಗರ ಹಾಗೂ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ಗಳು ಕಂಡುಬರಲಿಲ್ಲ. ಜೊತೆಗೆ, ಬಸ್ಗಳ ಸಂಚಾರ ಸ್ತಬ್ಧಗೊಂಡಿದ್ದ ಮಾಹಿತಿ ಇದ್ದಿದ್ದರಿಂದ, ಪ್ರಯಾಣಿಕರು ಕೂಡ ನಿಲ್ದಾಣಗಳತ್ತ ಸುಳಿಯಲಿಲ್ಲ. ರಜಾ ದಿನವೂ ಆಗಿದ್ದರಿಂದ ವಿಟಿಯು, ಆರ್ಸಿಯು ಕ್ಯಾಂಪಸ್ ಹಾಗೂ ವಿವಿಧ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಬಸ್ ನಿಲ್ದಾಣಗಳತ್ತ ಬೆಳಿಗ್ಗೆ ಬರಲಿಲ್ಲ. ಇದರಿಂದಾಗಿ ನಿಲ್ದಾಣ ಬಿಕೋ ಎನ್ನುತ್ತಿತ್ತು. ತುರ್ತು ಕೆಲಸಗಳಿಗೆಂದು ಪ್ರಯಾಣ ಮಾಡಲೇಬೇಕಾದವರು ಖಾಸಗಿ ವಾಹನಗಳ ಮೊರೆ ಹೋದರು.