ಗೋಕಾಕ: ಬಸ್ ಢಿಕ್ಕಿಯಿಂದ ಮೃತಪಟ್ಟ ಯುವಕನ ವಾರಸುದಾರರಿಗೆ ಪರಿಹಾರ ನೀಡುವಂತೆ ಹೊರಡಿಸಿದ್ದ ಆದೇಶವನ್ನು ಪಾಲಿಸದಿದ್ದಕ್ಕೆ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಸ್ಥಳೀಯ ಘಟಕಕ್ಕೆ ಸೇರಿದ ಬಸ್ವೊಂದನ್ನು ಅಧಿಕಾರಿಗಳು ಜಪ್ತಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
2014ರ ಆಗಸ್ಟ್ 21ರಂದು ನಗರದ ಬ್ಯಾಳಿಕಾಟಾ ಬಳಿಯ ಸಿ.ಎಸ್. ಅಂಗಡಿ ಪ್ರೌಢಶಾಲಾ ರಸ್ತೆಯಲ್ಲಿ ಸಾರಿಗೆ ಬಸ್ ಢಿಕ್ಕಿ ಹೊಡೆದಿದ್ದರಿಂದ ಗೋಕಾಕ ತಾಲ್ಲೂಕಿನ ಬೀರನಗಡ್ಡಿ ಗ್ರಾಮದ, ಎಂಬಿಎ ಪದವೀಧರ ಪ್ರಕಾಶ ಬಸವಲಿಂಗಪ್ಪ ತೆಳಗಡೆ (25) ಸ್ಥಳದಲ್ಲಿಯೇ ಸಾವಿಗೀಡಾಗಿದ್ದರು.
ತಮ್ಮ ಮಗನ ಸಾವಿಗೆ ಪರಿಹಾರ ನೀಡುವಂತೆ ಕೋರಿ ಬಸವಲಿಂಗಪ್ಪ ಅವರು ಸಾರಿಗೆ ಸಂಸ್ಥೆಯ ವಿರುದ್ಧ ಇಲ್ಲಿಯ 2ನೇ ಹೆಚ್ಚುವರಿ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಾಧೀಕರಣದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಕರಣವು, ₹ 30.24 ಲಕ್ಷ ಪರಿಹಾರ ಪಾವತಿಸುವಂತೆ ಆದೇಶ ನೀಡಿತ್ತು.
ಜನವರಿಯಲ್ಲಿಯೇ ಆದೇಶ ನೀಡಿದ್ದರೂ, ಸಾರಿಗೆ ಸಂಸ್ಥೆಯು ಪರಿಹಾರ ಪಾವತಿಸಿರಲಿಲ್ಲ. ಹೀಗಾಗಿನ್ಯಾಯಾಲಯದ ಬೇಲೀಫ್ ಬಾಬು ಮಾವರಕರ ಅವರು ಗೋಕಾಕ ಘಟಕದ ಬಸ್ ಸಂಖ್ಯೆ ಕೆಎ-23 ಎಫ್-973ನ್ನು ಜಪ್ತಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ದರಖಾಸ್ತದಾರ ಪರವಾಗಿ ವಕೀಲ ಬಿ.ಎಂ.ಕಲ್ಲೋಳಿ ವಾದಿಸಿದ್ದರು.