ಬೆಳಗಾವಿ: ‘ಕಾನೂನು ವಿದ್ಯಾರ್ಥಿಗಳು ವೃತ್ತಿಪರ ವಿಚಾರದಲ್ಲಿ ಮಾತ್ರವಲ್ಲದೇ ಸಮಾಜದ ಅಭಿವೃದ್ಧಿ ಚಟುವಟಿಕೆಗಳಲ್ಲೂ ತೊಡಗಬೇಕು’ ಎಂದು ಎಲ್ಐಸಿ ಚಿಕ್ಕೋಡಿ ವಿಭಾಗದ ಅಭಿವೃದ್ಧಿ ಅಧಿಕಾರಿ ಆನಂದ ಅರವಾರೆ ಹೇಳಿದರು.
ಇಲ್ಲಿನ ಬಿ.ವಿ. ಬೆಲ್ಲದ ಕಾನೂನು ಕಾಲೇಜಿನಲ್ಲಿ ಮಂಗಳವಾರ ನಡೆದ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.
‘ಜಾಗತೀಕರಣದ ಹಿನ್ನೆಲೆಯಲ್ಲಿ ಕಾನೂನು ಶಿಕ್ಷಣಕ್ಕೆ ಹಿಂದಿಗಿಂತ ಈಗಿನ ದಿನಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ಬಂದಿದೆ. ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವುದಕ್ಕಾಗಿ ಅಗತ್ಯವಾದ ಜ್ಞಾನ, ಕೌಶಲವನ್ನು ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಕಾಲೇಜಿನ ಸ್ಥಾನಿಕ ಮಂಡಳಿ ಅಧ್ಯಕ್ಷ ಆರ್.ಬಿ. ಬೆಲ್ಲದ ಮಾತನಾಡಿ, ‘ವಕೀಲಿ ವೃತ್ತಿ ಅತ್ಯಂತ ಶ್ರೇಷ್ಠವಾದುದು. ಕಕ್ಷಿದಾರರ ವಿಶ್ವಾಸ ಗಳಿಸಿದರೆ, ವಕೀಲನ ಜವಾಬ್ದಾರಿ ಸಾರ್ಥಕವಾಗುತ್ತದೆ’ ಎಂದರು.
ಪಿಎಚ್ಡಿ ಪಡೆದ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವಿಜಯ ಮುರದಂಡೆ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಪ್ರಾಚಾರ್ಯ ಡಾ.ಬಿ. ಜಯಸಿಂಹ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಉಮಾ ಹಿರೇಮಠ ವಾರ್ಷಿಕ ವರದಿ ಮಂಡಿಸಿದರು. ಅಭಿಷೇಕ ಹಪ್ಪಳಿ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿ ಸಂಘದ ಪ್ರತಿನಿಧಿ ಸರಸ್ವತಿ ಮೆಳಗೆ ವಂದಿಸಿದರು.