ಬೆಳಗಾವಿ: ಅನುಮತಿ ಪಡೆಯದೆ ನಗರದಲ್ಲಿ ಮೆರವಣಿಗೆ ನಡೆಸಿದ ಆರೋಪದ ಮೇಲೆ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)ಯ 200 ಮಂದಿ ವಿರುದ್ಧ ಕ್ಯಾಂಪ್ ಠಾಣೆ ಪೊಲೀಸರು ಬುಧವಾರ ಪ್ರಕರಣ ದಾಖಲಿಸಿದ್ದಾರೆ.
ಆ ಸಂಘಟನೆಯ ಮುಖಂಡರಾದ ಮನೋಹರ ಕಿಣೇಕರ, ದೀಪಕ ದಳವಿ, ಪ್ರಕಾಶ ಶಿರೋಳಕರ ಸೇರಿದಂತೆ 200 ಮಂದಿ ವಿರುದ್ಧ ದೂರು ದಾಖಲಾಗಿದೆ.
‘ಬೆಳಗಾವಿ ಮಹಾನಗರ ಪಾಲಿಕೆ ಎದುರಿನ ಕನ್ನಡ ಧ್ವಜ ತೆರವುಗೊಳಿಸಬೇಕು. ಕರ್ನಾಟಕ ರಾಜ್ಯೋತ್ಸವದಂದು ಕರಾಳ ದಿನಕ್ಕೆ ಅವಕಾಶ ನೀಡಬೇಕು. ದಾಖಲೆಗಳನ್ನು ಮರಾಠಿಯಲ್ಲಿ ನೀಡಬೇಕು. ಫಲಕಗಳನ್ನು ಮರಾಠಿ ಬಳಸಬೇಕು’ ಎಂದು ಆಗ್ರಹಿಸಿ ಎಂಇಎಸ್ನವರು ಧರ್ಮವೀರ ಸಂಭಾಜಿ ವೃತ್ತದಿಂದ ರಾಣಿ ಚನ್ನಮ್ಮ ವೃತ್ತದವರೆಗೆ ಸೋಮವಾರ ಪ್ರತಿಭಟನಾ ಮೆರವಣೆಗೆ ನಡೆಸಿದ್ದರು.
ಪೊಲೀಸ್ ಅಧಿಕಾರಿಗಳ ಸೂಚನೆ ಹೊರತಾಗಿಯೂ ಪಟ್ಟು ಹಿಡಿದು ಮೆರವಣಿಗೆ ಮಾಡಿದ್ದರು. ಮನವಿ ಸ್ವೀಕರಿಸಲು ಬಂದಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರನ್ನು ಅಪಮಾನಿಸಿದ್ದರು. ಕರ್ನಾಟಕ ಸರ್ಕಾರ ನಾಲಾಯಕ್ ಸರ್ಕಾರ ಎಂದು ಧಿಕ್ಕಾರ ಕೂಗಿದ್ದರು. ಜೈ ಮಹಾರಾಷ್ಟ್ರ ಘೋಷಣೆ ಕೂಗಿದ್ದರು. ಅವರ ವರ್ತನೆ ಬಗ್ಗೆ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಕ್ರಮಕ್ಕೆ ಆಗ್ರಹಿಸಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕರ್ನಾಟಕ ಸಾಂಕ್ರಾಮಿಕ ರೋಗ ಕಾಯ್ದೆಯಲ್ಲಿ ಪ್ರಕರಣ ದಾಖಲಾಗಿದೆ.