ಬೆಳಗಾವಿ: ‘ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ (ಆರ್ಸಿಯು) ರಾಷ್ಟ್ರೀಯ ಶಿಕ್ಷಣ ನೀತಿ–2019ರ ಅನುಗುಣವಾಗಿ ಪಿಜಿ ಹಾಗೂ ಯುಜಿ ಪಠ್ಯಕ್ರಮದಲ್ಲಿ ಸಿಬಿಸಿಎಸ್ (ಚಾಯ್ಸ್ ಬೇಸ್ಡ್ ಕ್ರೆಡಿಟ್ ಸಿಸ್ಟಂ) ಪದ್ಧತಿಯನ್ನು 2020–21ನೇ ಸಾಲಿನಿಂದ ಅಳವಡಿಸಿಕೊಳ್ಳಲಾಗುವುದು’ ಎಂದು ಕುಲಪತಿ ಪ್ರೊ.ಎಂ ರಾಮಚಂದ್ರಗೌಡ ತಿಳಿಸಿದರು.
‘ಕೌಶಲ ಆಧಾರಿತ ಪಠ್ಯಕ್ರಮ ಸಿದ್ಧಪಡಿಸುವಂತೆ ಎಲ್ಲ ವಿಭಾಗಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಈ ಮೂಲಕ ಇಲ್ಲಿನ ವಿದ್ಯಾರ್ಥಿಗಳಿಗೆ ಜಾಗತಿಕ ಗುಣಮಟ್ಟದ ಉನ್ನತ ಶಿಕ್ಷಣ ಒದಗಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಸಿದ್ಧತೆ ನಡೆದಿದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಆರ್ಸಿಯುನಲ್ಲಿ ಪ್ರಸ್ತುತ 19 ಸ್ನಾತಕೋತ್ತರ ಕೋರ್ಸ್ಗಳು ಲಭ್ಯ ಇವೆ. ಹೆಚ್ಚಿನ ಕೋರ್ಸ್ಗಳಿಗಾಗಿ ಈ ಭಾಗದ ವಿದ್ಯಾರ್ಥಿಗಳು ಬೇರೆ ಬೇರೆ ವಿಶ್ವವಿದ್ಯಾಲಯಗಳಿಗೆ ಹೋಗುತ್ತಿರುವುದು ಕಂಡುಬರುತ್ತಿದೆ. ಬೇರೆ ವಿಶ್ವವಿದ್ಯಾಲಯಗಳಲ್ಲಿ 70ರಿಂದ 80 ಸ್ನಾತಕೋತ್ತರ ಪದವಿ ಕೋರ್ಸ್ಗಳು ಇರುತ್ತವೆ. ಹೀಗಾಗಿ, ನಮ್ಮಲ್ಲೂ ಹೆಚ್ಚಿನ ಕೋರ್ಸ್ಗಳನ್ನು ಆರಂಭಿಸಲಾಗುವುದು’ ಎಂದು ತಿಳಿಸಿದರು.
ಪರ್ಯಾಯ ಜಾಗ ನೋಡಿಕೊಳ್ಳಿ:‘ಪ್ರಸ್ತುತ ಕ್ಯಾಂಪಸ್ ಇರುವ ಜಾಗ ಅರಣ್ಯ ಇಲಾಖೆಗೆ ಸೇರಿದ್ದಾಗಿದೆ. ನಮಗೆ ಜಮೀನು ಮಂಜೂರಾದಲ್ಲಿ 60ರಿಂದ 70 ಹೊಸ ಕೋರ್ಸ್ಗಳನ್ನು ಆರಂಭಿಸಲಾಗುವುದು. ಈ ಮೂಲಕ ವಿ.ವಿಯನ್ನು ಉನ್ನತ ಶಿಕ್ಷಣದ ಪ್ರಧಾನಧಾರೆಗೆ ತಂದು ನಿಲ್ಲಿಸುವ ಮತ್ತು 2 ವರ್ಷದಲ್ಲಿ ವಿಟಿಯು ಮಾದರಿಯ ಕ್ಯಾಂಪಸ್ ಅಭಿವೃದ್ಧಿಪಡಿಸಲು ಶ್ರಮಿಸಲಾಗುವುದು’ ಎಂದು ಹೇಳಿದರು.
‘ಭೂತರಾಮನಹಟ್ಟಿ ಬಳಿ ಎಚ್ಎಚ್–4ಗೆ ಹೊಂದಿಕೊಂಡಂತೆ ಇರುವ 168.76 ಎಕರೆ ಪ್ರದೇಶವು ವಿಶ್ವವಿದ್ಯಾಲಯಕ್ಕೆ ಸ್ಥಳಾಂತರವಾಗಿಲ್ಲ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಿದೆ. ಕೇಂದ್ರ ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಮಂತ್ರಾಲಯದ ಅರಣ್ಯ ಸಲಹಾ ಸಮಿತಿಯು ಬೇರೊಂದು ಪರ್ಯಾಯ ಭೂಮಿ ಹುಡುಕಾಟ ತೀವ್ರಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ತಿಳಿಸಿ, ವಿಶ್ವವಿದ್ಯಾಲಯಕ್ಕೆ ಪ್ರಸ್ತಾವವನ್ನು ಹಿಂತಿರುಗಿಸಿದೆ. ನಗರದಲ್ಲಿ ಜಮೀನು ಸಿಗದಿದ್ದಲ್ಲಿ ಇತರ ತಾಲ್ಲೂಕುಗಳಿಗೆ ಸ್ಥಳಾಂತರಿಸಿ, ಅಭಿವೃದ್ಧಿಪಡಿಸಲಾಗುವುದು. ಚನ್ನಮ್ಮನ ಕಿತ್ತೂರು ಬಳಿ ಹಾಗೂ ನಗರದ ಸೇನೆಗೆ ಸೇರಿದ ಜಾಗವನ್ನು ಗುರುತಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.
ಮೂಲಸೌಲಭ್ಯ ಹೆಚ್ಚಳ:‘ವಿಜಯಪುರ, ಬಾಗಲಕೋಟೆ, ಜಮಖಂಡಿ ಸ್ನಾತಕೋತ್ತರ ಕೇಂದ್ರಗಳಲ್ಲಿ ಹೆಚ್ಚಿನ ಮೂಲಸೌಲಭ್ಯ ಒದಗಿಸಿ, ಕೌಶಲ ಹಾಗೂ ಮಾರುಕಟ್ಟೆ ಆಧಾರಿತ ಮಾನವ ಸಂಪನ್ಮೂಲ ಅಭಿವೃದ್ಧಿಪಡಿಸುವ ಅತ್ಯಾಧುನಿಕ 4ರಿಂದ 5 ಕೋರ್ಸ್ಗಳನ್ನು ಆರಂಭಿಸಲಾಗುವುದು. ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಯೋಜಿಸಲಾಗಿದೆ. ವಿಜಯಪುರದಲ್ಲಿ 31 ಎಕರೆ, ಜಮಖಂಡಿಯಲ್ಲಿ 72 ಎಕರೆ ಮತ್ತು ಬಾಗಲಕೋಟೆಯಲ್ಲಿ ಜಮೀನು ಪಡೆದುಕೊಳ್ಳಲು ಪ್ರಕ್ರಿಯೆ ಪ್ರಗತಿಯಲ್ಲಿದೆ’ ಎಂದು ಯೋಜನೆಗಳನ್ನು ಹಂಚಿಕೊಂಡರು.
‘ಇಲ್ಲಿನ ಸಂಗೊಳ್ಳಿರಾಯಣ್ಣ ಪ್ರಥಮ ದರ್ಜೆ ಘಟಕ ಕಾಲೇಜಿನಲ್ಲಿ 2ನೇ ಹಂತದಲ್ಲಿ ₹ 4.80 ಕೋಟಿ ವೆಚ್ಚದ ಕಟ್ಟಡ ಕಾಮಗಾರಿ ಶೀಘ್ರವೇ ಪೂರ್ಣಗೊಳ್ಳಲಿದೆ. 3ನೇ ಹಂತದಲ್ಲಿ ₹ 10 ಕೋಟಿ ವೆಚ್ಚದಲ್ಲಿ ಮತ್ತೊಂದು ಕಟ್ಟಡ ನಿರ್ಮಿಸಲಾಗುವುದು. ಅತ್ಯಾಧುನಿಕ ಪ್ರಯೋಗಾಲಯ, ಉತ್ತಮ ಗ್ರಂಥಾಲಯ ಒದಗಿಸಲಾಗುವುದು’ ಎಂದರು.
ಕುಲಸಚಿವರಾದ ಪ್ರೊ.ರಂಗರಾಜ ವನದುರ್ಗ, ಬಸವರಾಜ ಪದ್ಮಸಾಲಿ, ಹಣಕಾಸು ಅಧಿಕಾರಿ ಶಂಕರಾನಂದ ಬನಶಂಕರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.