ಜೊಯಿಡಾ: ಕೆಲವು ದಿನಗಳಿಂದ ತಾಲ್ಲೂಕಿನಾದ್ಯಂತ ಮುಂಗಾರು ಮಳೆ ಅಬ್ಬರಿಸುತ್ತಿದ್ದು, ಸೋಮವಾರವೂದಿನವಿಡೀಗಾಳಿ ಸಹಿತವಾಗಿ ಬಿರುಸಾಗಿ ಸುರಿಯಿತು.
ಕ್ಯಾಸರಲಾಕ್ ಭಾಗದಲ್ಲಿ ಸತತ ಮೂರು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ. ಕಾಳಿಯ ಉಪನದಿಯಾದ ಪಾಂಡರಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಇದರ ಪರಿಣಾಮವಾಗಿ ರಾಮನಗರ– ಜಗಲಪೇಟ್ನಿಂದ ಬಾಜಾರಕುಣಂಗ ಕ್ಯಾಸರಲಾಕ್ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಚಾಂದವಾಡಿ ಸೇತುವೆ ಸಂಪೂರ್ಣ ಮುಳುಗಿದೆ.
ರಾಮನಗರಕ್ಕೆ ಬರುವ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಕುಣಗಿಣಿ, ಇವೋಲಿ, ಕುವೇಶಿ, ಕೋನಶೇತ ಮುಂತಾದ ಊರಿನ ಸಾರ್ವಜನಿಕರಿಗೆ ತೊಂದರೆಯಾಗಿದೆ. ಸದ್ಯ ಅವರು ಅನಮೋಡ ಮಾರ್ಗದ ಮೂಲಕ ಸುಮಾರು 20ಕಿಲೋಮೀಟರ್ಗೂ ಹೆಚ್ಚು ಸುತ್ತಿಕೊಂಡು ಬರಬೇಕಾಗಿದೆ.
‘ಹಲವು ವರ್ಷಗಳಿಂದ ಈ ಸೇತುವೆ ಮುಳುಗುತ್ತಿದೆ.ಇಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆಂದು ಎರಡು ವರ್ಷಗಳ ಹಿಂದೆ ₹ 4.32 ಕೋಟಿ ಮಂಜೂರಾಗಿತ್ತು. ಆದರೆ,ಕಾಮಗಾರಿ ಮಾತ್ರ ಇನ್ನೂಪ್ರಾರಂಭವಾಗಿಲ್ಲ’ ಎಂದು ಚಾಂದವಾಡಿಯ ನಿವಾಸಿ ವಿಶ್ವಾಸ ದೇಸಾಯಿ ಅಸಮಾಧಾನ ವ್ಯಕ್ತಪಡಿಸಿದರು.