ಬೆಳಗಾವಿ: ಚಂದ್ರಯಾನ–3ರ ಗಗನನೌಕೆಯು ಚಂದ್ರನ ಮೇಲೆ ಇಳಿದ ತಕ್ಷಣ ಜಿಲ್ಲೆಯಲ್ಲಿ ಸಂಭ್ರಮ ಮನೆ ಮಾಡಿತು. ಮೊಬೈಲ್ಗಳಲ್ಲಿ, ಟಿವಿಗಳಲ್ಲಿ ನೇರ ಪ್ರಸಾರ ವೀಕ್ಷಿಸಿದರು. ಹಲವು ಶಾಲೆ– ಕಾಲೇಜುಗಳಲ್ಲಿ ಬೃಹತ್ ಪರದೆಯ ಮೂಲಕ ಮಕ್ಕಳಿಗೆ ರೋಚಕ ಕ್ಷಣಗಳನ್ನು ನೋಡುವ ವ್ಯವಸ್ಥೆ ಮಾಡಲಾಯಿತು.
ಇಲ್ಲಿನ ಶಿವಬಸವ ನಗರದ ಡಾ.ಸ.ಜ. ನಾಗಲೋಟಿಮಠ ವಿಜ್ಞಾನ ಕೇಂದ್ರದಲ್ಲಿ ಬೃಹತ್ ಎಲ್ಇಡಿ ಪರದೆಯ ವ್ಯವಸ್ಥೆ ಮಾಡಲಾಯಿತು. ರೋವರ್ ಯಂತ್ರ ಚಂದ್ರನ ಮೇಲೆ ಇಳಿಯುತ್ತಿದ್ದಂತೆಯೇ ಮಕ್ಕಳು ಹೋಯ್... ಎಂದು ಕೂಗಿ, ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ಅಂತರಿಕ್ಷ ಯಾನದ ಕುತೂಹಲವನ್ನು ನಾಗನೂರು ರುದ್ರಾಕ್ಷಿ ಮಠದ ಅಲ್ಲಮಪ್ರಭು ಸ್ವಾಮೀಜಿ ಕೂಡ ಕಣ್ತುಂಬಿಕೊಂಡರು. ‘ಭಾರತವನ್ನು ವಿಶ್ವಗುರು ಮಾಡಿದ ಶ್ರೇಯಸ್ಸು ಇಸ್ರೊ ವಿಜ್ಞಾನಿಗಳಿಗೆ ಸಲ್ಲುತ್ತದೆ. ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವ ಮುಟ್ಟಿದ ದೇಶ ನಮ್ಮದು’ ಎಂದರು.
ವಿಜ್ಞಾನ ಕೇಂದ್ರದ ಯೋಜನಾ ಸಹಾಯಕ ರಾಜಶೇಖರ ಪಾಟೀಲ ಮಾತನಾಡಿ, ‘ಜಗತ್ತಿನ 195 ರಾಷ್ಟ್ರಗಳು ಮಾಡದ ಸಾಧನೆಯನ್ನು ನಮ್ಮ ದೇಶ ಮಾಡಿದೆ. ಖಗೋಳದಲ್ಲಿ ಇಸ್ರೊ ವಿಜ್ಞಾನಿಗಳ ಹೆಸರು ಅಚ್ಚಳಿಯದಂತೆ ಉಳಿದಿದೆ’ ಎಂದರು.
ಶಿವಬಸವ ಸ್ವಾಮೀಜಿ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ಶಿವಾನಂದ ತಂಬಾಕೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.