ಬೆಳಗಾವಿ: ಜಿಲ್ಲೆಯ ವಿವಿಧ 12 ಕೇಂದ್ರಗಳಲ್ಲಿ ಹಮ್ಮಿಕೊಂಡಿರುವ ಕೋವಿಡ್ ಲಸಿಕೆ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಲಾಯಿತು.
ನಗರದ ಜಿಲ್ಲಾಸ್ಪತ್ರೆಯಲ್ಲಿ ಶಾಸಕರಾದ ಅಭಯ ಪಾಟೀಲ ಹಾಗೂ ಅನಿಲ ಬೆನಕೆ ಸಮ್ಮುಖದಲ್ಲಿ ಬಿಮ್ಸ್ ಸಿಬ್ಬಂದಿ ರಮೇಶ್ ಕುಂಬಾರ ಅವರಿಗೆ ವೈದ್ಯಕೀಯ ಸಿಬ್ಬಂದಿ ಲಸಿಕೆ ಕೊಟ್ಟರು. ಅವರನ್ನು ವೀಕ್ಷಣಾ ಕೊಠಡಿಯಲ್ಲಿರಿಸಿ ಆರೋಗ್ಯ ಸ್ಥಿತಿಗತಿಯ ಮೇಲೆ ನಿಗಾ ವಹಿಸಲಾಗಿದೆ.
ಡಿಎಚ್ಒ ಡಾ.ಎಸ್.ವಿ. ಮುನ್ಯಾಳ, ಲಸಿಕಾ ಅಧಿಕಾರಿ ಡಾ. ಈಶ್ವರ ಗಡಾದ, ಬಿಮ್ಸ್ ವೈದ್ಯಕೀಯ ನಿರ್ದೇಶಕ ಡಾ.ವಿನಯ್ ದಾಸ್ತಿಕೊಪ್ಪ ಮೊದಲಾದವರು ಭಾಗವಹಿಸಿದ್ದರು.
'ಲಸಿಕೆಯ ಉಪಯೋಗವನ್ನು ಜನರು ಪಡೆದುಕೊಳ್ಳಬೇಕು. ಜಿಲ್ಲೆಯಲ್ಲೇ ಮೊದಲ ಬಾರಿಗೆ ನಾನು ಲಸಿಕೆ ತೆಗೆದುಕೊಂಡಿದ್ದಕ್ಕೆ ಖುಷಿಯಾಗಿದೆ. ಕೊರೊನಾ ವಿರುದ್ಧವೇ ಹೋರಾಡಿದ್ದೇವೆ. ಹೀಗಿರುವಾಗ ಲಸಿಕೆ ಪಡೆದುಕೊಳ್ಳಲು ಆತಂಕ ಪಡಬೇಕೇಕೆ?' ಎಂದು ರಮೇಶ್ ಕುಂಬಾರ ಪ್ರಜಾವಾಣಿಗೆ ಪ್ರತಿಕ್ರಿಯಿಸಿದರು.