ಅಥಣಿ: ತಾಲ್ಲೂಕಿನ ನಂದೇಶ್ವರ ಗ್ರಾಮದ ಮುಬಾರಕ್ ಅಪ್ಪಾಲಾಲ್ ಮುಲ್ಲಾ (25) ಅವರ ಮೇಲೆ ಎರಗಿದ ಮೊಸಳೆ ತೊಡೆಯ ಬಾಗ ಕಚ್ಚಿ ಗಾಯಗೊಳಿಸಿದ್ದು, ಇದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ನಂದೇಶ್ವರದ ಹೊರವಲಯದ ಕಬ್ಬಿನ ಗದ್ದೆಯಲ್ಲಿ ದನಗಳಿಗೆ ಮೇವು ತರಲು ಹೋದಾಗ ಮೊಸಳೆ ಒಮ್ಮೆಲೆ ಮೇಲೆರಗಿ ಕಚ್ಚಿದೆ. ಅವರನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಷಯ ತಿಳಿದ ಗ್ರಾಮಸ್ಥರು, 8 ಅಡಿ ಉದ್ದದ ಆ ಮೊಸಳೆಯನ್ನು ಹಿಡಿದು ಗ್ರಾಮದ ರಂಗಮಂದಿರದಲ್ಲಿ ತಂದಿಟ್ಟಿದ್ದರು. ನಂತರ ಅರಣ್ಯ ಇಲಾಖೆ ಸಿಬ್ಬಂದಿಗೆ ಒಪ್ಪಿಸಿದರು.
ಹೋದ ತಿಂಗಳು ಸತ್ತಿ ಗ್ರಾಮದ ಹೊರವಲಯದ ಕಬ್ಬಿನ ಗದ್ದೆಯಲ್ಲಿದ್ದ ಮೊಸಳೆಯನ್ನು ಗ್ರಾಮಸ್ಥರು ಸೆರೆ ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿಗೆ ಒಪ್ಪಿಸಿದ್ದರು.
ನದಿ ದಂಡೆಯ ಗ್ರಾಮಗಳಲ್ಲಿ ಆಗಾಗ ಮೊಸಳೆಗಳು ಕಾಣಿಸಿಕೊಳ್ಳುತ್ತಿವೆ. ಇದರಿಂದ ಅಲ್ಲಿನ ಜನರು ಆತಂಕದಲ್ಲೇ ಕಾಳ ಕಳೆಯುವಂತಾಗಿದೆ.